ಬ್ಯಾರಿ, ತುಳು, ಅರೆಭಾಷೆ ಅಕಾಡಮಿಗಳಿಗೆ ಸದಸ್ಯರ ನೇಮಕ
ಮಂಗಳೂರು, ಜು.2: ರಾಜ್ಯ ಸರಕಾರವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ತುಳು ಸಾಹಿತ್ಯ ಅಕಾಡಮಿ, ಅರೆಭಾಷೆ, ಸಾಹಿತ್ಯ, ಸಂಸ್ಕೃತಿ ಅಕಾಡಮಿಗಳಿಗೆ ಸದಸ್ಯರನ್ನು ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಬ್ಯಾರಿ ಅಕಾಡಮಿಗೆ ಕಾಸರಗೋಡಿನ ರಾಧಾಕೃಷ್ಣ ನಾವಡ, ಮಂಜೇಶ್ವರದ ರೂಪಾಶ್ರೀ ವರ್ಕಾಡಿ, ಪತ್ರಕರ್ತರಾದ ಬಂಟ್ವಾಳ ತಾಲೂಕಿನ ಸಂಶೀರ್ ಬುಡೋಳಿ ಮತ್ತು ಉಡುಪಿಯ ನಝೀರ್ ಪೊಲ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ರಾಧಾಕೃಷ್ಣ ನಾವಡ ಅವರು ಬಪ್ಪಬ್ಯಾರಿಯ ಪಾತ್ರ ಮಾಡಿದ್ದರೆ, ರೂಪಾಶ್ರೀ ವರ್ಕಾಡಿ ಬ್ಯಾರಿ ಚಲನಚಿತ್ರ ಮತ್ತು ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ತುಳು ಅಕಾಡಮಿಗೆ ಕೊಡಗಿನ ರವಿ ಪಿಎಂ, ಮುಲ್ಕಿಯ ನರೇಂದ್ರ ಕೆರೆಕಾಡು, ದುಬೈಯ ಸರ್ವೋತ್ತಮ ಶೆಟ್ಟಿ, ಬೆಳ್ತಂಗಡಿಯ ಸಂತೋಷ್ ಕುಮಾರ್, ಉಡುಪಿಯ ಕಲಾವತಿ ಆಯ್ಕೆಯಾಗಿದ್ದಾರೆ.
ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಅಕಾಡಮಿಗೆ ಕೊಡಗಿನ ಡಾ. ದಯಾನಂದ ಕೆ.ಸಿ., ಭಾರತಿ ರಮೇಶ್, ದ.ಕ.ಜಿಲ್ಲೆಯ ಕುಸುಮಾಧರ ಎಟಿ ಸುಳ್ಯ, ಡಾ. ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ ಆಯ್ಕೆಯಾಗಿದ್ದಾರೆ.