ಮಂಗಳೂರು ವಿವಿಯ ಕೊಣಾಜೆ ಕ್ಯಾಂಪಸ್ ನಲ್ಲಿ ಕಾಲೇಜ್ ಬಂದ್ ಮಾಡದಂತೆ ಎನ್ಎಸ್ ಯುಐ ಮನವಿ
ಮಂಗಳೂರು, ಜು.4: ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಕ್ಯಾಂಪಸ್ ನಲ್ಲಿ 2017ರಲ್ಲಿ ಪ್ರಥಮ ದರ್ಜೆ ಕಾಲೇಜಿಗೆ ಸರಕಾರದ ಅನುಮೋದನೆ ಲಭಿಸಿರುವುದು ಹಾಗೂ ಆರ್ಥಿಕ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷ ಆ ಕಾಲೇಜನ್ನೇ ಬಂದ್ ಮಾಡಲು ವಿ.ವಿ ತಿರ್ಮಾನಿಸಿರುವುದರಿಂದ ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಕ್ಕೆ ತರುವಂತಹ ಕೆಲಸಕ್ಕೆ ವಿ.ವಿ ಕಾರಣವಾಗುತ್ತದೆ ಎಂದು ತಿಳಿದು ಎನ್ಎಸ್ ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯರವರ ನೇತೃತ್ವದ ನೀಯೋಗವು ಕುಲಪತಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಸವಾದ್ ಸುಳ್ಯ, ವಿ.ವಿಯು 2021-22ನೇ ಅವಧಿಗೆ ಪ್ರವೇಶಾತಿ ಸ್ಥಗಿತಗೊಳಿಸಿರುವುದಲ್ಲದೆ, ಮೊದಲ ಹಾಗೂ ದ್ವಿತೀಯ ವರ್ಷವನ್ನು ಈಗಾಗಲೇ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳನ್ನು ಅವರು ಅಪೇಕ್ಷಿಸುವ ಹತ್ತಿರದ ಕಾಲೇಜ್ ಗಳಿಗೆ ವರ್ಗಾವಣೆ ಮಾಡುವ ಸಂಬಂಧ ವಿವಿ ಚಿಂತನೆ ನಡೆಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ವಿ.ವಿ ಕ್ಯಾಂಪಸ್ ನ ಪ್ರಥಮ ದರ್ಜೆ ಕಾಲೇಜನ್ನು ಬಂದ್ ಮಾಡಲು ತಿರ್ಮಾನಿಸಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಷ್ಟ ಉಂಟಾಗುವುದರಿಂದ ಈ ಕೂಡಲೇ ಸರಕಾರ ಕಾಲೇಜನ್ನು ಮುಂದುವರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಕ್ಕೆ ಉಂಟಾಗದಂತೆ ಸರಕಾರ ಸೂಕ್ತ ಪರಿಹಾರ ಮಾಡಬೇಕಾಗಿದೆ. ಇಲ್ಲವಾದಲ್ಲಿ ದ.ಕ ಜಿಲ್ಲಾ ಎನ್ಎಸ್ ಯುಐ ವತಿಯಿಂದ ತೀವ್ರ ಹೋರಾಟ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಎನ್ಎಸ್ ಯುಐ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜ್ ಅಧ್ಯಕ್ಷ ಸಿರಾಜ್ ಗುದ್ರು, ಜಿಲ್ಲಾ ಎನ್ಎಸ್ ಯುಐ ಪ್ರಧಾನ ಕಾರ್ಯದರ್ಶಿ ಅಸ್ಟನ್ ಸಿಕ್ವೇರ, ಗುರುದತ್ ಉಪಸ್ಥಿತರಿದ್ದರು.