ದ.ಕ. ಜಿಲ್ಲೆಯಲ್ಲಿ ಮಂಗಳವಾರ 91 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿಗೆ ಮೂವರು ಬಲಿ
ಮಂಗಳೂರು, ಜು.14: ದ.ಕ. ಜಿಲ್ಲೆಯಲ್ಲಿ ಮಂಗಳವಾರವೂ ಕೊರೋನ ಸೋಂಕಿಗೆ ಮೂವರು ಬಲಿಯಾಗುವುದರ ಜೊತೆಗೆ, 91 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಂಗಳವಾರ ಮೂವರು ಸೋಂಕಿನಿಂದ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದಾಗಿ ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಮಂಗಳವಾರ ಮೃತಪಟ್ಟವರ ಪೈಕಿ ಇಬ್ಬರು ಐಸಿಯುನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮತ್ತೋರ್ವ ತೀವ್ರ ಉಸಿರಾಟದ ತೊಂದರೆ ಬಳಲುತ್ತಿದ್ದರು. ಮೃತಪಟ್ಟವರೆಲ್ಲ 55 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಉಡುಪಿಯ ಕುಂದಾಪುರದ 55 ವರ್ಷದ ಪುರುಷನು ತೀವ್ರ ಉಸಿರಾಟ ತೊಂದರೆ, ಮಂಗಳೂರಿನ 70 ವರ್ಷದ ವೃದ್ಧ ತೀವ್ರ ಉಸಿರಾಟ ತೊಂದರೆಯ ಸಿಂಡ್ರೋಮ್ (ಎಆರ್ಡಿಎಸ್) ಹಾಗೂ ಅಧಿಕ ರಕ್ತದೊತ್ತಡ, ಹಾಸನದ ಸಕಲೇಶಪುರದ 65 ವರ್ಷದ ವೃದ್ಧೆ ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾದಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಮಂಗಳವಾರ ವರದಿಯಾದ ಮರಣ ಪ್ರಕರಣಗಳ ಸಾವಿನ ಕಾರಣವನ್ನು ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ‘ಡೆತ್ ಆಡಿಟ್’ ವರದಿ ನಿರೀಕ್ಷಣೆಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
91 ಮಂದಿಗೆ ಕೊರೋನ ಪಾಸಿಟಿವ್: ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದ ಕೊರೋನ ಸೋಂಕು ಪ್ರಕರಣಗಳಲ್ಲಿ ಮಂಗಳವಾರ ಕೊಂಚ ಕಡಿಮೆಯಾಗಿದೆ. 91 ಮಂದಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,452ಕ್ಕೆ ಏರಿಕೆಯಾಗಿದೆ. ಜೊತೆಗೆ 47 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿತರ ಪೈಕಿ ‘ಸೋಂಕು ಮೂಲವೇ ಪತ್ತೆಯಾಗದ’ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. ಮಂಗಳವಾರವೂ ಬರೋಬ್ಬರಿ 35 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಎರಡು ವಾರಗಳಿಂದ ಏಕಾಏಕಿ ಸೋಂಕು ಹರಡುವುದು ಹೆಚ್ಚಳಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಭೀತಿ ಉಂಟು ಮಾಡಿದೆ.
ಹೊಸದಾಗಿ ಸೋಂಕು ಪತ್ತೆಯಾದ 91 ಮಂದಿಯಲ್ಲಿ ಕೇವಲ 20 ಮಂದಿಗೆ ಮಾತ್ರ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದರೆ, ಇನ್ಫ್ಲೂಯೆನ್ಜಾ ಲೈಕ್ ಇಲ್ನೆಸ್ (ಶೀತ) 29 ಪ್ರಕರಣಗಳು ಪತ್ತೆಯಾಗಿವೆ. ಎಸ್ಎಆರ್ಐ (ತೀವ್ರ ಉಸಿರಾಟ ಸಮಸ್ಯೆ) ಐದು ಪ್ರಕರಣಗಳು ಇವೆ. ವಿದೇಶದಿಂದ ಬಂದಿದ್ದ ಹಾಗೂ ಪ್ರೀ-ಸರ್ಜರಿಯಲ್ಲಿ ತಲಾ ಓರ್ವರಲ್ಲಿ ಪಾಸಿಟಿವ್ ದೃಢಪಟ್ಟಿದೆ.