ಮುಸ್ಲಿಂ ದಫನ ಭೂಮಿ ಮಂಜೂರು ಮಾಡಲು ಖಾಝಿ ಮನವಿ
ಮಂಗಳೂರು, ಜು.15: ಕೊರೋನ ರೋಗದಿಂದ ಮೃತಪಟ್ಟ ಮುಸ್ಲಿಮ್ ವ್ಯಕ್ತಿಗಳ ದಫನ ಮಾಡಲು ಜಾಗದ ಸಮಸ್ಯೆಯಾಗುತ್ತಿದೆ. ಹಾಗಾಗಿ ಸರಕಾರ ಶೀಘ್ರ ಮುಸ್ಲಿಂ ದಫನ ಭೂಮಿಯನ್ನು ಮಂಜೂರು ಮಾಡಬೇಕು ಎಂದು ದ.ಕ.ಜಿಲ್ಲಾಧಿಕಾರಿಗೆ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮನವಿ ಮಾಡಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಹೊಸ ಮಾರ್ಗಸೂಚಿ ಪಾಲಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿರುವ ಖಾಝಿ, ಯಾವುದೇ ರೋಗದ ಲಕ್ಷಣ ಕಾಣಿಸದೆ ಪಾಸಿಟಿವ್ ಕಂಡುಬಂದಲ್ಲಿ ಆರೋಗ್ಯ ಕಾರ್ಯಕರ್ತರು ಹೋಮ್ ಐಸೊಲೇಶನ್ನಲ್ಲಿ ಕಡ್ಡಾಯವಾಗಿರಬೇಕು. ಈ ವೇಳೆ ಯಾರೂ ಮನೆಯಿಂದ ಹೊರಗೆ ಹೋಗಬಾರದು. ಮನೆಯಲ್ಲಿ ಕೂಡ ಸುರಕ್ಷಿತ ಅಂತರವನ್ನು ಪಾಲಿಸಬೇಕು. 60 ವರ್ಷ ಮೇಲ್ಪಟ್ಟ ವಯಸ್ಸಿನವರು ಮತ್ತು 10 ವರ್ಷದ ಕೆಳಗಿನವರು ಹಾಗೂ ನಿತ್ಯ ರೋಗಿಗಳಲ್ಲಿ ಕೊರೋನ ರೋಗದ ಲಕ್ಷಣ ಕಂಡುಬಂದಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಬೇಕು. ಅಕ್ಕಪಕ್ಕದ ಮನೆಯ ಹೋಮ್ಐಸೊಲೇಶನ್ನಲ್ಲಿರುವವರನ್ನು ಕೀಳುಮಟ್ಟದಲ್ಲಿ ಕಾಣದೆ ಧೈರ್ಯ ತುಂಬಬೇಕು. ಕೋವಿಡ್ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ವರ್ಗ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಗೌರವಯುವವಾಗಿ ಕಾಣಬೇಕು ಎಂದು ಮನವಿ ಮಾಡಿದ್ದಾರೆ.