ಬೈಕಿಗೆ ಲಾರಿ ಢಿಕ್ಕಿ: ಇಬ್ಬರು ಬೈಕ್ ಸವಾರರು ಮೃತ್ಯು
ಶಿವಮೊಗ್ಗ, ಜು.21: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ವಿದ್ಯಾ ನಗರದ ದುರ್ಗಮ್ಮ ಬೀದಿ ಬಳಿ ಬಿಎಚ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಗೋಂದಿಚಟ್ನಳ್ಳಿ ನಿವಾಸಿಗಳಾದ ನವೀನ್(30) ಮತ್ತು ವಿಜಯ್(33) ಎಂದು ಗುರುತಿಸಲಾಗಿದೆ. ಬೈಕ್ ಸವಾರರು ಉಂಬ್ಳೆಬೈಲಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಉಂಬ್ಳೆಬೈಲಿನ ಭದ್ರ ಜಾಲಶಯದ ಹಿನ್ನೀರು ಭಾಗದಲ್ಲಿ ಮೀನು ಹಿಡಿಯಲು ತೆರಳುತ್ತಿದ್ದರು. ಈ ವೇಳೆ ತುಂಗಾ ಸೇತುವೆ ಕಡೆಯಿಂದ ತೆರಳುತ್ತಿದ್ದ ಬೈಕ್ ಮತ್ತು ಭದ್ರಾವತಿ ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಡಬಲ್ ರೋಡ್ ಇದ್ದರೂ ಲಾರಿ ಮತ್ತು ಬೈಕ್ ಒಂದೇ ಬದಿಯಲ್ಲಿ ಬಂದಿದ್ದರಿಂದ ಮುಖಾಮುಖಿ ಢಿಕ್ಕಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಲಾಕ್ಡೌನ್ ಹಿನ್ನಲೆಯಲ್ಲಿ ಒಂದು ಬದಿಯ ರಸ್ತೆಯನ್ನು ಬಂದ್ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಢಿಕ್ಕಿಯ ರಭಸಕ್ಕೆ ಪಲ್ಸರ್ ಬೈಕಿನಲ್ಲಿದ್ದ ಒಬ್ಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.