ಆಶ್ರಯ ನೀಡಲು ಮಹಿಳಾ ನಿಲಯದಿಂದ ನಿರಾಕರಣೆ ಆರೋಪ: ಉಡುಪಿಯಲ್ಲಿ ಅಸಹಾಯಕ ಯುವತಿಯ ರಕ್ಷಣೆ
ಉಡುಪಿ, ಆ.9: ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿದ್ದ ಅಪರಿಚಿತ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಆ.8ರಂದು ರಕ್ಷಿಸಿದ್ದಾರೆ. ಆದರೆ ಯುವತಿಗೆ ಸುರಕ್ಷಿತ ನೆಲೆ ಕಲ್ಪಿಸಬೇಕಾದ ರಾಜ್ಯ ಮಹಿಳಾ ನಿಲಯವು ಆಶ್ರಯ ನೀಡಲು ನಿರಾಕರಿಸಿದೆಂದು ವಿಶು ಶೆಟ್ಟಿ ಆರೋಪಿಸಿದ್ದಾರೆ.
ನಗರದ ಸರ್ವಿಸ್ ಬಸ್ ನಿಲ್ಧಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 35 ವರ್ಷದ ಅಪರಿಚಿತ ಯುವತಿಯೊಬ್ಬಳನ್ನು ಮಾಹಿತಿಯಂತೆ ಸಮಾಜ ಸೇವಕ ವಿಶು ಶೆಟ್ಟಿ, ಮಹಿಳಾ ಪೋಲಿಸ್ ಠಾಣೆಯ ಸಿಬ್ಭಂದಿ ಜ್ಯೋತಿ ನೆರವಿನೊಂದಿಗೆ ರಕ್ಷಿಸಿದ್ದಾರೆ. ಬೆಂಗಳೂರು ಮೂಲದ ಈ ಯುವತಿ ಮನನೊಂದು ಇಲ್ಲಿಗೆ ಬಂದಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.
ಆಕೆಯನ್ನು ನಿಟ್ಟೂರು ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಲು ಅಜ್ಜರ ಕಾಡು ಜಿಲ್ಲಾಸ್ಪತ್ರೆಯ ಕೊರೋನ ಸೋಂಕು ತಪಾಸಣೆ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಆಕೆಯ ವರದಿಯು ನೆಗಟಿವ್ ಬಂದಿದೆ. ನಂತರ ಯುವತಿಯನ್ನು ಮಹಿಳಾ ನಿಲಯಕ್ಕೆ ಕರೆದ್ಯೊಲು ಕಾನೂನು ಪ್ರಕ್ರಿಯೆ ಮೂಲಕ ಮಹಿಳಾ ಠಾಣೆಯ ಮೂಲಕ ವಿನಂತಿಸಿದಾಗ, ನಿಲಯದ ಅಧಿಕಾರಿ ಯಿಂದ ಆಶ್ರಯ ನೀಡಲು ನಿರಾಕಾರಿಸಿರು ಎಂದು ವಿಶು ಶೆಟ್ಟಿ ದೂರಿದರು.
ಆಸ್ಪತ್ರೆಯವರು ನೆಗಟಿವ್ ವರದಿಯನ್ನು ಮೌಖಿಕ ರೂಪದಲ್ಲಿ ನೀಡಿದ್ದು, ಮಹಿಳಾ ನಿಲಯದ ಮೇಲ್ವಿಚಾರಕರು ಲಿಖಿತ ವರದಿ ನೀಡುವಂತೆ ತಿಳಿಸಿ ದ್ದಾರೆ. ಆ ಕಾರಣದಿಂದ ಅಸಹಾಯಕ ಯುವತಿಗೆ ಆಶ್ರಯ ನೀಡಲು ನಿರಾಕರಿಸಿದ್ದಾರೆ. ಬಳಿಕ ಆಕೆಯನ್ನು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಆಸ್ಪತ್ರೆಯಲ್ಲಿ ದಾಖಲುಪಡಿಸಲಾಯಿತು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ಆಶಾ ನಿಲಯದಲ್ಲಿ 70ಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳು ಇರುವುದರಿಂದ ಹೊಸಬರುವಾಗ ಕೊರೋನ ಪರೀಕ್ಷೆ ಮಾಡುವಂತೆ ತಿಳಿಸಿದ್ದೇವೆ. ಆದರೆ ಅಧಿಕೃತ ವರದಿ ಬಾರದೆ ಸೇರಿಸಲು ಸಾಧ್ಯವಿಲ್ಲ. ಇಲ್ಲಿ ಪ್ರತ್ಯೇಕ ಶೌಚಾ ಲಯದ ವ್ಯವಸ್ಥೆ ಕೂಡ ಇಲ್ಲದೆ ಸಮಸ್ಯೆ ಆಗುತ್ತದೆ. ಆದರೂ ಬೇರೆ ಕಡೆ ಆಶ್ರಯ ನೀಡುವುದಾಗಿ ಹೇಳಿದ್ದೇವೆ. ಅದಕ್ಕೆ ಅವರು ಒಪ್ಪದೆ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
-ಶೇಷಪ್ಪ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ