‘ಪ್ಲಾಸ್ಮಾ’ ದಾನ ಮಾಡಿ : ಖಾಝಿ ಬೇಕಲ ಉಸ್ತಾದ್
ಮಂಗಳೂರು, ಆ.12: ಕೊರೋನ ರೋಗಿಗಳಿಗೆ ‘ಪ್ಲಾಸ್ಮಾ’ ಅಗತ್ಯವಿರುವುದರಿಂದ ಅರ್ಹರು ‘ಪ್ಲಾಸ್ಮಾ’ ದಾನ ಮಾಡುವ ಮೂಲಕ ಜೀವವನ್ನು ಉಳಿಸುವ ಪುಣ್ಯ ಕಾರ್ಯಕ್ಕೆ ಮುಂದಾಗಬೇಕು ಎಂದು ಉಡುಪಿ ಸಂಯುಕ್ತ ಖಾಝಿ ಅಲ್ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಮನವಿ ಮಾಡಿದ್ದಾರೆ.
ದ.ಕ.ಮತ್ತು ಉಡುಪಿ ಸಹಿತ ಕರಾವಳಿಯ ಜಿಲ್ಲೆಗಳಲ್ಲಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳ ಜಿಲ್ಲೆಗಳ ಜನತೆಯಲ್ಲಿ ‘ಪ್ಲಾಸ್ಮಾ’ ದಾನ ಬಗ್ಗೆ ತಪ್ಪು ಕಲ್ಪನೆ ಇದೆ. ‘ಪ್ಲಾಸ್ಮಾ’ ದಾನ ಮಾಡಬಾರದು ಎಂದು ಅಪಪ್ರಚಾರವನ್ನೂ ಮಾಡಲಾಗುತ್ತದೆ. ಪ್ಲಾಸ್ಮಾ ದಾನದ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ. ಇದು ರಕ್ತದಾನಕ್ಕೆ ಇರುವಷ್ಟೇ ಮಹತ್ವವಿದೆ. ಮುಸ್ಲಿಂ ಸಮಾಜದಲ್ಲಿ ರಕ್ತದಾನದ ಬಗ್ಗೆ ಹೇಗೆ ಜನರಲ್ಲಿ ಜಾಗೃತಿ ಮೂಡಿದೆಯೋ ಅದೇ ರೀತಿ ಪ್ಲಾಸ್ಮಾ ದಾನದ ಬಗ್ಗೆಯೂ ಜಾಗೃತಿ ಮೂಡಬೇಕಿದೆ. ಅದಕ್ಕಾಗಿ ಎಲ್ಲಾ ಜಮಾಅತರು, ಮುಸ್ಲಿಂ ಸಂಘಟನೆಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಬೇಕಲ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಸುಮಾರು 15-20 ವರ್ಷದ ಹಿಂದೆ ರಕ್ತದಾನದ ಬಗ್ಗೆ ತಪ್ಪು ಕಲ್ಪನೆ ಇತ್ತು. ಬಳಿಕ ಮುಸ್ಲಿಂ ಉಲಮಾ-ಉಮರಾಗಳು ಸೇರಿಕೊಂಡು ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದರ ಫಲವಾಗಿ ಇಂದು ಜಮಾಅತ್ ಮಟ್ಟದಲ್ಲೂ ರಕ್ತದಾನ ಶಿಬಿರ ನಡೆಯುತ್ತಿದೆ. ಹಾಗಾಗಿ ಅರ್ಹರು ‘ಪ್ಲಾಸ್ಮಾ’ ದಾನ ಮಾಡಲು ಮುಂದೆ ಬರಬೇಕು ಮತ್ತು ಜನರು, ಸಂಘಸಂಸ್ಥೆಗಳ ಮುಖಂಡರು ಸಂಘಟಿತರಾಗಬೇಕು ಎಂದು ತಿಳಿಸಿದ್ದಾರೆ.