ಶಿವಪುರ ಸರಕಾರಿ ಶಾಲೆಯಲ್ಲಿ ರಸ್ತೆ ಕಾಮಗಾರಿಯ ಪರಿಕರ ದಾಸ್ತಾನು : ಹಳೆ ವಿದ್ಯಾರ್ಥಿಗಳಿಂದ ವಿರೋಧ
ಹೆಬ್ರಿ, ಸೆ.9: ಶಿವಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗುತ್ತಿಗೆದಾರರು ರಸ್ತೆ ನಿರ್ಮಾಣದ ಸಾಮಾಗ್ರಿಗಳ ದಾಸ್ತಾನು ಕೇಂದ್ರವಾಗಿ ಬಳಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲ ಸಲಕರಣೆಗಳನ್ನು ಇಂದು ತೆರವುಗೊಳಿಸಲಾಯಿತು.
ಶಾಲೆಯ ಸಮೀಪ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆದಾರರು, ಶಾಲೆಯವರಿಂದ ಅನುಮತಿ ಪಡೆದು, ಜಲ್ಲಿ, ಮರಳು, ಜೆಸಿಬಿ, ಲಾರಿಗಳನ್ನು ಶಾಲಾ ಮೈದಾನದಲ್ಲಿ ಇರಿಸಿದ್ದರು. ಅದೇ ರೀತಿ ಮಳೆಯ ಕಾರಣಕ್ಕೆ ಶಾಲೆಯ ರಂಗಮಂದಿರವನ್ನು ಸಿಮೆಂಟ್ ದಾಸ್ತಾನಿಗಾಗಿ ಬಳಕೆ ಮಾಡಿದ್ದರು. ಇದಕ್ಕೆ ಶಾಲೆಯ ಕೆಲವು ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ತಿೀವ್ರ ವಿರೋಧ ವ್ಯಕ್ತ ಪಡಿಸಿದ್ದರು.
‘ಶಾಲೆಯ ಆವರಣದ ಒಳಗೆ ಲೋಡ್ಗಟ್ಟಲೆ ಜಲ್ಲಿ ದಾಸ್ತಾನು ಇರಿಸ ಲಾಗಿದೆ. ದಾನಿಗಳು ಶಾಲೆಗೆ ಕೊಡುಗೆಯಾಗಿ ನೀಡಿದ ಮಕ್ಕಳ ರಂಗ ಮಂದಿರ ಈಗ ಸಿಮೆಂಟ್ ಗೋಡೌನ್ ಆಗಿದೆ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆ ಯುತ್ತಿದ್ದ ತರಗತಿಗಳು ಕಾರ್ಮಿಕರ ವಿಶ್ರಾಂತಿ ಕೊಠಡಿಯಾಗಿದೆ. ಪ್ರತಿ ನಿತ್ಯ ಟಿಪ್ಪರ್, ಜೇಸಿಬಿಗಳ ಓಡಾಟದಿಂದಾಗಿ ಶಾಲೆಯ ಕ್ರೀಡಾ ಮೈದಾನ ಸದ್ಯ ಕೆಸರುಗುಂಡಿಯಾಗಿ ಪರಿವರ್ತನೆ ಯಾಗಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿ ಸುರೇಶ್ ರಾವ್ ಕುಂದಾರು ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗಳು ನಡೆದ ಪರಿ ಣಾಮ, ಇಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಅವರ ಸೂಚನೆಯಂತೆ ಗುತ್ತಿಗೆದಾರರು, ಶಾಲೆಯ ಆವರಣದಲ್ಲಿ ಇರಿಸಲಾದ ರಸ್ತೆಗೆ ಕಾಮಗಾರಿಗೆ ಸಂಬಂಧಿಸಿದ ಜಲ್ಲಿ, ಸಿಮೆಂಟ್ ಸೇರಿದಂತೆ ಇತರ ಪರಿಕರಗಳನ್ನು ಅಲ್ಲಿಂದ ತೆರವುಗೊಳಿಸಿ ಬೇರೆ ಡೆ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.
ಶಾಲೆಯ ಹಳೆ ವಿದ್ಯಾರ್ಥಿಯೊಬ್ಬರೇ ಈ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿದ್ದು, ಕಾಮಗಾರಿ ಮುಗಿದ ಬಳಿಕ ಶಾಲೆಯ ಮೈದಾನ ಸಮತಟ್ಟು ಗೊಳಿಸಿ, ಇಡೀ ಶಾಲೆಗೆ ಸುಣ್ಣ ಬಣ್ಣ ಬಳಿಯುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಸಲಕರಣೆಯನ್ನು ಶಾಲಾ ಆವರಣದಲ್ಲಿ ಇರಿಸಲು ಅವಕಾಶ ಮಾಡಿಕೊಡಲಾಗಿದೆ. ಶಾಲೆಗೆ ಹಾಗೂ ಶಾಲಾ ಮಕ್ಕಳಿಗೆ ಒಳಿತು ಆಗಬಹುದೆಂಬ ಉದ್ದೇಶದಿಂದ ಇದಕ್ಕೆ ಅನುಮತಿ ನೀಡಲಾಗಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿರುವುದರಿಂದ ಅವುಗಳನ್ನು ತೆರವುಗೊಳಿಸಲಾಗಿದೆ.
-ಶಶಿಧರ್ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ