ಮೋದಿ ಸಹಿತ ಬಿಜೆಪಿ ಪಕ್ಷ ಸುಳ್ಳು ಹೇಳುವ ಫ್ಯಾಕ್ಟರಿ: ಪ್ರತಿಭಾ ಕುಳಾಯಿ
ಉಡುಪಿ, ಸೆ.19: ನರೇಂದ್ರ ಮೋದಿ ಏನು ಮಾಡದೆ ಎಲ್ಲವೂ ನಾನೇ ಮಾಡಿದೆ ಹೇಳುವುದರಲ್ಲಿ ನಂಬರ್ ಒನ್ ಹೊರತು ಪ್ರಧಾನಿಯಾಗಿ ನಂಬರ್ ಒನ್ ಅಲ್ಲ. ಮೋದಿ ಸೇರಿದಂತೆ ಇಡೀ ಬಿಜೆಪಿ ಪಕ್ಷವೇ ಸುಳ್ಳು ಮಾತನಾಡುವ ಫ್ಯಾಕ್ಟರಿಯಾಗಿದೆ. ಆದುದರಿಂದ ಈ ಪಕ್ಷದ ಸಂಸದರು ಹಾಗೂ ಶಾಸಕರಿಂದ ಜನಸಾಮಾನ್ಯರು ಏನೂ ಕೂಡ ನಿರೀಕ್ಷಿಸುವಂತಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಟೀಕಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳ ವಿರೋಧಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಶನಿವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಭೆಟಿ ಬಚಾವೋ ಹೇಳುವ ಈ ಸರಕಾರದ ಅವಧಿಯಲ್ಲಿಯೇ ದೇಶದಲ್ಲಿ ಅತ್ಯಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಮೋದಿ ನಮ್ಮ ದೇಶದ ಸೈನ್ಯವನ್ನು ರಾಜಕೀಯ ಅಜೆಂಡಾ ಆಗಿ ಚುನಾವಣಾ ಪ್ರಚಾರಕ್ಕೆ ಬಳಸಿದ ಏಕೈಕ ಪ್ರಧಾನಿ. ಯುವಕರಿಗೆ ಉದ್ಯೋಗ ಇಲ್ಲದೆ ದೇಶದ ಜಿಡಿಪಿ ಕುಸಿತ ಆಗುತ್ತಿದೆ. ಕೊರೋನದ ಹೆಸರಿನಲ್ಲಿ ಬಿಜೆಪಿಯವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರ ಭಾವನೆ ಯನ್ನು ಕೆರಳಿಸಿ ರಾಜ ಕೀಯ ಬೇಳೆ ಬೇಯಿಸುತ್ತಿದ್ದಾರೆ ಎಂದು ಅವರು ದೂರಿದರು.
ಕೆಪಿಸಿಸಿ ಕಾರ್ಯದರ್ಶಿ ವರೋನಿಕಾ ಕರ್ನೆಲಿಯೋ ಮಾತನಾಡಿ, ಆಶ್ರಯ ಮನೆ ಸ್ಥಗಿತ, ಗ್ಯಾಸ್ ಸಬ್ಸಿಡಿ ಕಡಿತ, ಪಿಂಚಣಿ ವಿಳಂಬ, ಕೋವಿಡ್ ನಿಯಂತ್ರಿ ಸುವಲ್ಲಿ ವಿಫಲ ಹೀಗೆ ಸರಕಾರದ ಹಲವು ವೈಫಲ್ಯಗಳಿಂದ ಮಹಿಳೆಯರ ಮೇಲೆ ನೇರ ಪರಿಣಾಮ ಬೀರುತ್ತಿವೆ. ಆದುದರಿಂದ ಈ ಸರಕಾರ ಮಹಿಳಾ ವಿರೋಧಿ ಆಗಿದೆ ಎಂದು ಆರೋಪಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಬ್ಲಾಕ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಮುಖಂಡ ಜ್ಯೋತಿ ಹೆಬ್ಬಾರ್, ಗೋಪಿ ನಾಯ್ಕಾ, ಡಾ.ಸುನೀತಾ ಶೆಟ್ಟಿ, ರೋಶಿನಿ ಒಲಿವೇರಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರು ಉಪಸ್ಥಿತರಿದ್ದರು.