ಅಕ್ರಮ ಬಾಕ್ಸೈಟ್ ಸಾಗಾಟ: ಲಾರಿ, ಹಿಟಾಚಿ ವಶ, 1.59 ಲಕ್ಷ ರೂ. ದಂಡ
ಬೈಂದೂರು ಸೆ.30: ಒತ್ತಿನೆಣೆಯ ಸೆಳ್ಳೆಕುಳ್ಳಿ ಎಂಬಲ್ಲಿರುವ ಉಡುಪಿ ಜಿಪಂ ಸದಸ್ಯರೊಬ್ಬರ ಜಾಗದಿಂದ ಲಾರಿಯಲ್ಲಿ ಅಕ್ರಮವಾಗಿ ಬಾಕ್ಸೈಟ್ ಅಂಶಗಳನ್ನು ಹೊಂದಿರುವ ಮಣ್ಣು ಸಾಗಾಟ ಮಾಡುತ್ತಿದ್ದ ಎರಡು ಲಾರಿಯನ್ನು ಬೈಂದೂರು ಪೊಲೀಸರು ಮಂಗಳವಾರ ದಾಳಿ ನಡೆಸಿ ವಶಪಡಿಸಿ ಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಸುರೇಶ್ ಬಟವಾಡಿ ಎಂಬ ವರ ಜಾಗದಿಂದ ಶ್ರೀಕಾಂತ್ ಶೆಟ್ಟಿ ಎಂಬವರು ಕಳೆದ ಒಂದು ತಿಂಗಳಿಂದ ಗಣಿ ಇಲಾಖೆಯ ಅನುಮತಿ ಪಡೆಯದ ಮಣ್ಣನ್ನು ಕೈಗಾರಿಕಾ ಉದ್ದೇಶಕ್ಕಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದರೆನ್ನ ಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಬೈಂದೂರು ಎಸ್ಸೈ ಸಂಗೀತಾ ನೇತೃತ್ವದ ಪೊಲೀಸ್ ತಂಡ, ಎರಡು ಲಾರಿಗಳು, ಮಣ್ಣು ಹಾಗೂ ಒಂದು ಹಿಟಾಚಿ ಯಂತ್ರವನ್ನು ವಶಪಡೆಸಿಕೊಂಡಿದ್ದಾರೆ.
ಬುಧವಾರ ಸ್ಥಳಕ್ಕೆ ಆಗಮಿಸಿರುವ ಗಣಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಲಾರಿಯನ್ನು ಮತ್ತು 30 ಲಕ್ಷ ಮೆಟ್ರಿಕ್ ಟನ್ ಮಣ್ಣನ್ನು ವಶಪಡಿಸಿಕೊಂಡು, 1.59ಲಕ್ಷ ರೂ. ದಂಡ ವಿಧಿಸಿದ್ದಾರೆ. ಈ ಮಣ್ಣು ಸಿಮೆಂಟ್ ಕೈಗಾರಿಕೆಗಳಲ್ಲಿ ಬಳಸಲು ಸಾಗಾಟ ಮಾಡುತಿ್ತದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಫ್ಯಾಕ್ಟರಿ ನಿರ್ಮಾಣ ಮಾಡುವ ಉದ್ದೇಶದಿಂದ ನಮ್ಮ ಪಟ್ಟ ಜಾಗದಲ್ಲಿರುವ ಗುಡ್ಡಗಾಡು ಪ್ರದೇಶವನ್ನು ಸಮತಟ್ಟು ಮಾಡಲು ಶ್ರೀಕಾಂತ್ ಶೆಟ್ಟಿಗೆ ಗುತ್ತಿಗೆ ವಹಿಸಲಾಗಿತ್ತು. ಅದಕ್ಕಾಗಿ ಅವರಿಂದ ಯಾವುದೇ ರೀತಿಯಲ್ಲಿ ಹಣ ಪಡೆದು ಕೊಂಡಿಲ್ಲ. ನಮಗೆ ಈ ಜಾಗದಲ್ಲಿ ಬಾಕ್ಸೈಟ್ ಅಂಶ ಇರುವ ಬಗ್ಗೆ ಯಾವುದೇ ರೀತಿಯ ಮಾಹಿತಿಯಿಲ್ಲ. ಅನುಮತಿ ಪಡೆಯದೆ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ ಕಾರಣಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಜಿಪಂ ಸದಸ್ಯ ಸುರೇಶ್ ಬಟವಾಡಿ ತಿಳಿಸಿದ್ದಾರೆ.