ಹೊಸಂಗಡಿ: ಸ್ಕೂಟರ್ಗೆ ಲಾರಿ ಢಿಕ್ಕಿ; ಮಹಿಳೆ ಸ್ಥಳದಲ್ಲೇ ಮೃತ್ಯು
ಮಂಜೇಶ್ವರ, ಜು.18: ದಂಪತಿ ಸಂಚರಿಸುತ್ತಿದ್ದ ಸ್ಕೂಟರ್ಗೆ ಮೀನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸ್ಕೂಟರ್ನಲ್ಲಿದ್ದ ದಂಪತಿಯ ಪೈಕಿ ಪತ್ನಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಂಗಡಿ ಪೇಟೆ ಬಳಿ ಸಂಭವಿಸಿದೆ.
ಸೋಮವಾರ ಮಧ್ಯಾಹ್ನ ಹೊಸಂಗಡಿ ಪೇಟೆಯಲ್ಲಿ ಅಪಘಾತ ಸಂಭವಿಸಿದೆ. ಮಹಿಳೆಯ ಪತಿ ಹಾಗೂ 10 ತಿಂಗಳು ಪ್ರಾಯದ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಮಹಿಳೆಯನ್ನು ಮಂಜೇಶ್ವರ ಪಾವೂರು ನಿವಾಸಿ, ಪೊಯ್ಯತ್ತಬೈಲು ನಿವಾಸಿ ಅಬ್ಬಾಸ್ ಎಂಬವರ ಪತ್ನಿ ಆಯಿಶತ್ ಮುನೀಬಾ(28) ಎಂದು ಗುರುತಿಸಲಾಗಿದೆ.
ಉಪ್ಪಳ ಹಿದಾಯತ್ ನಗರದ ಸಭಾಂಗಣವೊಂದರಲ್ಲಿ ನಡೆದ ಸಂಬಂಧಿಕರೋರ್ವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಹೊಸಂಗಡಿ ಪೇಟೆಯಿಂದ ಆನೆಕಲ್ಲು ರಸ್ತೆಗೆ ಸ್ಕೂಟರ್ನ್ನು ತಿರುಗಿಸುತ್ತಿದ್ದ ವೇಳೆ ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಅತಿ ವೇಗದಿಂದ ಸಂಚರಿಸುತ್ತಿದ್ದ ಮೀನಿನ ಲಾರಿ ಇವರ ಸ್ಕೂಟರ್ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ರಸ್ತೆಗೆಸೆಯಲ್ಪಟ್ಟ ಅಬ್ಬಾಸ್ ಹಾಗೂ 10 ತಿಂಗಳು ಪ್ರಾಯದ ಮಗು ಸುನೈಬಾ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪತ್ನಿ ಮುನೀಬಾರ ಮೈ ಮೇಲೆಯೇ ಲಾರಿ ಹರಿದು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಗೆ ಮೀನು ಲಾರಿ ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಉದ್ರಿಕ್ತಗೊಂಡ ನಾಗರಿಕರು ಲಾರಿಯನ್ನು ತಡೆದರಲ್ಲದೆ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.