ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಕುರ್ಚಿ ಅಲುಗಾಡುತ್ತಿದೆ: ಪೂಜಾರಿ
ಮಂಗಳೂರು, ಜು.26: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ಹೈಕಮಾಂಡ್ ಏನು ಹೇಳುತ್ತದೆ ಎನ್ನುವದನ್ನು ಅರಿಯಲು ಕೂಡಲೇ ದಿಲ್ಲಿಗೆ ತೆರಳಿ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಫರ್ಮಾನು ಹೊರಡಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೂಡಲೇ ಹೈಕಮಾಂಡ್ ಜೊತೆ ಚರ್ಚೆ ನಡೆಸದಿದ್ದರೆ, ಹೈಕಮಾಂಡ್ ಕೂಡಲೇ ಶಾಸಕರ ಸಭೆ ಕರೆಯಲಿದೆ. ಕಾರ್ಮಿಕರ ಸಮಸ್ಯೆಯನ್ನು ಅತ್ಯಂತ ಚೆನ್ನಾಗಿ ಬಲ್ಲ ಆಸ್ಕರ್ ಫೆರ್ನಾಂಡಿಸ್ರನ್ನು ಹೈಕಮಾಂಡ್ ಸಿಎಂ ಮಾಡಬಹುದು. ಅಥವಾ ಮಲ್ಲಿಕಾರ್ಜುನ ಖರ್ಗೆಯವರೂ ಸಿಎಂ ಆಗಬಹುದು. ಮಹಿಳೆಯರಿಗೆ ಸ್ಥಾನ ನೀಡಲು ನಿರ್ಧರಿಸಿದರೆ ‘ಸ್ತ್ರೀಶಕ್ತಿ’ ಹೊಸ ರೂಪ ಕೊಟ್ಟ ಮೋಟಮ್ಮ ಮುಖ್ಯಮಂತ್ರಿ ಆಗಬಹುದು. ಕೆಪಿಸಿಸಿ ಅಧ್ಯಕ್ಷ, ಗೃಹಸಚಿವ ಜಿ. ಪರಮೇಶ್ವರ್ ಅವರು ಕೂಡಾ ಮುಖ್ಯಮಂತ್ರಿ ಸ್ಥಾನ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ಗುಡುಗಿದರು.
ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಮಾತ್ರ ಕಣ್ಣಿದ್ದೂ ಕುರುಡರಾಗಿದ್ದಾರೆ, ಕಿವಿಯಿದ್ದು ಕುರುಡರಾಗಿದ್ದಾರೆ. ಸಿದ್ದು ಮೌನದಿಂದಾಗಿ ಸರಕಾರದ ಇಮೇಜ್ ಹಾಳಾಗುತ್ತಿದೆ. ಸಿದ್ದರಾಮಯ್ಯ ತಾವೇ ಬುದ್ಧಿವಂತರೆಂದು ಭಾವಿಸಿದ್ದಾರೆ. ಕಾರ್ಮಿಕರ ಮುಷ್ಕರದ ಬಗ್ಗೆ ಹಿರಿಯರಲ್ಲಿ ಚರ್ಚಿಸಬಹುದಿತ್ತಲ್ಲವೇ? ನಿಮ್ಮ ಬುದ್ಧಿಗೇಡಿ ವರ್ತನೆಯಿಂದಾಗಿ ಕಾಂಗ್ರೆಸ್ ಅವನತಿ ಹಾದಿಯಲ್ಲಿದೆ ಎಂದು ಮಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಎಸ್ಐ ರೂಪಾ ಪ್ರಕರಣದಲ್ಲೂ ಎಡವಿದ್ದೀರಿ, ಡಿ.ಕೆ.ರವಿ, ಗಣಪತಿ ಪ್ರಕರಣದಲ್ಲೂ ಎಡವಿದ್ದೀರಿ. ಇವೆಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಆದಷ್ಟು ಬೇಗ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು.
ಹೆಚ್ಚಿನ ಸಂದರ್ಭಗಳಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಪೂಜಾರಿ ಅವರು ಈ ಬಾರಿ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದುದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಕ್ಕೆ ವಿರುದ್ಧವಾಗಿ ಮಾತನಾಡುವವರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರಿಗೆ ಮುಜುಗರ ಆಗಬಾರದು ಎಂದು ಇಲ್ಲಿ ಸುದ್ದಿಗೋಷ್ಠಿ ನಡೆಸಿದ್ದೇನೆ. ನಾನು ಪಕ್ಷದ ಹಿತಕ್ಕಾಗಿ ಆ ರೀತಿ ಮಾತನಾಡುತ್ತಿದ್ದೇನೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿ ನಡೆಸಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅನುಮತಿ ಬೇಡವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಪತ್ರಿಕಾಗೋಷ್ಠಿ ನಡೆಸಲು ಜಿಲ್ಲಾಧ್ಯಕ್ಷ ಅನುಮತಿ ಬೇಕೇ ಬೇಕು ಎಂದೇನೂ ಇಲ್ಲ. ಅವರಿಗೆ ಹೆದರಿ ನಾನು ಇಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ. ಈಗಿನ ಅಧ್ಯಕ್ಷರಿಗೆ ಏನೂ ಜ್ಞಾನ ಇಲ್ಲ ಎಂದು ಲೇವಡಿ ಮಾಡಿದರು. ಜೊತೆಗೆ ನಾನು ಮಾತನಾಡುತ್ತಿರುವುದು ಪಕ್ಷದ ಹಿತಕ್ಕಾಗಿ ಎಂದರು.