ಹೆದ್ದಾರಿ ಸಮಸ್ಯೆಗಳನ್ನು ಪರಿಹರಿಸುವಂತೆ ಪುದು ಗ್ರಾಮಸ್ಥರಿಂದ ಹೆದ್ದಾರಿ ಇಲಾಖೆ ಇಂಜಿನಿಯರ್ಗೆ ಮನವಿ
ಬಂಟ್ವಾಳ, ಆ. 23: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ರಾಷ್ಟ್ರೀಯ ಹೆದ್ದಾರಿಯ ವಿವಿಧ ಸಮಸ್ಯೆಗಳ ಬಗೆಗಿನ ಮನವಿಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ನೇತೃತ್ವದ ನಿಯೋಗ ಸೋಮವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಅಜಿತ್ ಕುಮಾರ್ಗೆ ಮಂಗಳೂರಿನ ಕಚೇರಿಯಲ್ಲಿ ಸಲ್ಲಿಸಿದೆ.
ಪುದು ಗ್ರಾಪಂ ವ್ಯಾಪ್ತಿಯ ಸುಜೀರು ಬಳಿ ಪಾದಾಚಾರಿಗಳು ರಸ್ತೆ ದಾಟಲು ಮೇಲ್ಸೇತುವೆ ನಿರ್ಮಾಣ, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮಾರಿಪಳ್ಳ, ಫರಂಗಿಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದ್ದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯಂತೆ ಹಾಗೂ ಸ್ಥಳೀಯ ಶಾಲೆ, ಮಸೀದಿ, ಮಂದಿರಗಳಿಗೆ ತೆರಳುವವರ ಬೇಡಿಕೆಯಂತೆ ಈ ಮನವಿಯನ್ನು ಸಲ್ಲಿಸಿ ಅಧಿಕಾರಿಯೊಂದಿಗೆ ಚರ್ಚಿಸಲಾಯಿತು.
ಮನವಿಗೆ ತಕ್ಷಣ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬುಧವಾರ ಸ್ಥಳಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಈ ಸಂಧರ್ದಲ್ಲಿ ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯರಾದ ರಮ್ಲಾನ್, ಇಕ್ಬಾಲ್ ಮಾರಿಪಳ್ಳ, ಅಶ್ರದ್ ಡೈಮಂಡ್, ರಫೀಕ್ ಹಾಜರಿದ್ದರು.