ಮಂಜೇಶ್ವರ: ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ಬಲೆಗೆ ಬಿದ್ದ ಅಬಕಾರಿ ಅಧಿಕಾರಿ
ಮಂಜೇಶ್ವರ, ಆ.31: ಅಬಕಾರಿ ಅಧಿಕಾರಿಯೋರ್ವರು ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ಬಲೆಗೆ ಬಿದ್ದ ಘಟನೆ ಬುಧವಾರ ರಾತ್ರಿ ಮಂಜೇಶ್ವರ ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಮಂಜೇಶ್ವರ ಚೆಕ್ಪೋಸ್ಟ್ನ ಅಬಕಾರಿ ಅಧಿಕಾರಿ ರಂಜಿತ್ (35)ನನ್ನು ಕಾಸರಗೋಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಚೆಕ್ಪೋಸ್ಟ್ನಲ್ಲಿ ಲಂಚ ಪಡೆಯುತ್ತಿರುವುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಜಿಲೆನ್ಸ್ ನಿಗಾ ಇರಿಸಿತ್ತು. ಹೊರ ರಾಜ್ಯಗಳಿಂದ ಬರುವ ಸರಕು ವಾಹನಗಳಿಂದ ತಲಾ 100 ರೂ.ನಂತೆ ಪಡೆಯಲಾಗುತ್ತಿತ್ತು. ದಿನಂಪ್ರತಿ ಸಾವಿರಕ್ಕೂ ಅಧಿಕ ಸರಕು ವಾಹನಗಳು ಚೆಕ್ಪೋಸ್ಟ್ ಮೂಲಕ ಹಾದುಹೋಗುತ್ತಿದೆ. ಇದರಿಂದ ಸುಮಾರು ಒಂದು ಲಕ್ಷ ರೂ.ಗೂ ಅಧಿಕ ಹಣವನ್ನು ಲಂಚ ಪಡೆಯುವ ಮೂಲಕ ಸಂಪಾದಿಸುತ್ತಿದ್ದ ಎಂಬ ಮಾಹಿತಿ ವಿಜಿಲೆನ್ಸ್ಗೆ ಲಭಿಸಿದೆ.
ವಿಜಿಲೆನ್ಸ್ ಅಧಿಕಾರಿಗಳು ನೀಡಿದ 100 ರೂ. ನೋಟನ್ನು ತಮಿಳುನಾಡು ನಿವಾಸಿ ಟ್ರಕ್ ಚಾಲಕನೋರ್ವ ಹಸ್ತಾಂತರಿಸುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ವಿಜಿಲೆನ್ಸ್ ತಂಡ ಕಾರ್ಯಾಚರಣೆ ನಡೆಸಿ ರಂಜಿತ್ನನ್ನು ಬಂಧಿಸಿದೆ.