ಮೂಡುಬಿದಿರೆ: 53ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ
ಮೂಡುಬಿದಿರೆ,ಸೆ. 5: ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಮೂಡುಬಿದಿರೆ ಸಮಾಜಮಂದಿರದಲ್ಲಿ 5 ದಿನಗಳ ಕಾಲ ನಡೆಯಲಿರುವ 53ನೇ ವರ್ಷದ ಗಣೇಶೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಶ್ರೀ ಗಣೇಶ ವಿಗ್ರಹವನ್ನು ಅಲಂಗಾರು ಬಡಗು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ ಈಶ್ವರ ಭಟ್ ಪ್ರತಿಷ್ಠಾಪಿಸಿದರು.
ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ, ಪ್ರತಿ ಹಬ್ಬದಲ್ಲೂ ವಿಶೇಷತೆಯಿದೆ. ನಮ್ಮ ಹಬ್ಬಗಳಲ್ಲಿ ಶಿಸ್ತು, ಭಕ್ತಿ ಪ್ರಧಾನವಾಗಲಿ. ಅಶ್ಲೀಲತೆಯಿಂದ ಹೊರತಾದ ಗಣೇಶೋತ್ಸವ ಎಲ್ಲೆಡೆ ನಡೆಯಬೇಕು. ಪರಂಪರೆಗೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುವುದರಿಂದ ಧಾರ್ಮಿಕ ಜಾಗೃತಿ ಮೂಡಿಸಬಹುದು ಎಂದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಣಂಬೂರು ಎಸಿಪಿ ರಾಜೇಂದ್ರ, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಜಯಶ್ರೀ ಅಮರನಾಥ ಶೆಟ್ಟಿ, ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಪ್ರಾಸ್ತಾವಿಕವಾಗಿ ಮಾತನಾಡಿದರು.