ಆಫ್ರಿಕಾ ಓಪನ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯದ ಮುಹಮ್ಮದ್ ತಫೀಝ್ಅಹ್ಮದ್ ಗೆ ಸನ್ಮಾನ
ಮಂಗಳೂರು, ಸೆ.17: ಆಫ್ರಿಕಾದಲ್ಲಿ ನಡೆದ ಓಪನ್ ಚಾಂಪಿಯನ್ಶಿಪ್ನಲ್ಲಿ ಮಿಕ್ಸ್ ಮಾರ್ಷಲ್ ಆರ್ಟ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಬೆಂಗಳೂರಿನ ತಫೀಝ್ ಅಹ್ಮದ್ ಅವರಿಗೆ ಇಂದು ನಗರದ ರಾವ್ ರಾವ್ ಸರ್ಕಲ್ನಲ್ಲಿರುವ ಮದರಂಗಿ ಮಾಸಿಕ ಪತ್ರಿಕಾ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಅಭಿನಂದಿಸಿ ಮಾತನಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಅವರು ತಫೀಝ್ ಅಹ್ಮದ್ ಅವರು ಇದೇ ರೀತಿಯಲ್ಲಿ ಇನ್ನಷ್ಟು ಸಾಧನೆಗೈಯಲಿ. ಸಾಧನೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಹರಡಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಸಣ್ಣ ವಯಸ್ಸಿನಲ್ಲಿ ತಫೀಝ್ ಅಹ್ಮದ್ ಅವರು ಮಾಡಿರುವ ಸಾಧನೆ ಶ್ಲಾಘನೀಯ. ನಮ್ಮ ರಾಜ್ಯ , ರಾಷ್ಟ್ರಕ್ಕೆ ಅವರ ಸಾಧನೆ ಹೆಮ್ಮ ತರುವಂತಹದು ಎಂದು ಹೇಳಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ತಫೀಝ್ ಅಹ್ಮದ್ ಅವರು ಭಾರತಕ್ಕೆ ಹೊಸ ಕ್ರೀಡೆಯಾದ ಮಿಕ್ಸ್ ಮಾರ್ಷಲ್ ಆರ್ಟ್ನಲ್ಲಿ ಗೆಲುವು ಸಾಧಿಸಿ ಖುಷಿ ತಂದಿದೆ. ಸಾಲ ಮಾಡಿ ಈ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕಾಯಿತು. ಇನ್ನಷ್ಟು ಸಾಧನೆಯನ್ನು ಮಾಡಬೇಕೆಂಬ ಛಲವಿದೆ ಎಂದು ಹೇಳಿದರು.
ನವೆಂಬರ್ ನಲ್ಲಿ ನಡೆಯಲಿರುವ ಯೂರೋಫಿಯನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳು ಸಿದ್ದತೆ ನಡೆಸುತ್ತಿದ್ದು ಇದಕ್ಕೆ ಸುಮಾರು 2.5 ಲಕ್ಷ ಖರ್ಚಾಗಲಿದೆ. ಸರಕಾರದ ನಿರೀಕ್ಷೆಯನ್ನು ಹೊಂದಿದ್ದೇನೆ. ಶೀಘ್ರದಲ್ಲಿಯೆ ಕ್ರೀಡಾ ಸಚಿವರನ್ನು ಭೇಟಿಯಾಗಿ ಸಚಿವರಲ್ಲಿ ಸಹಕಾರವನ್ನು ಕೇಳಲಾಗುವುದು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪಾಡಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹಮೀದ್ ಕುದ್ರೋಳಿ , ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ, ಇಬ್ರಾಹಿಂ ನಂದಾವರ, ಜನನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೀತಾ, ಉಪಸ್ಥಿತರಿದ್ದರು.ಮದರಂಗಿ ಪತ್ರಿಕೆಯ ಪ್ರಕಾಶಕ ಅಬೂಬಕ್ಕರ್ ಕೈರಂಗಳ ಸ್ವಾಗತಿಸಿ, ವಂದಿಸಿದರು.