ಬಂಟ್ವಾಳ: ಬಿಲ್ಲವ ಭಾಂದವರ ಸಮಾಲೋಚನಾ ಸಭೆ ಮತ್ತು ತಾಲೂಕು ಸಮಿತಿ ರಚನೆ
ಬಂಟ್ವಾಳ,ಸೆ.24: ಪುತ್ತೂರು ತಾಲೂಕಿನ ಪಡುಮಲೆ ನಂದನ ಬಿತ್ತಿಲ್ನಲ್ಲಿ ಕೋಟಿ ಚೆನ್ನಯ ಮೂಲಸ್ಥಾನದ ನಿರ್ಮಾಣ ಕಾರ್ಯದ ಹಿನ್ನಲೆಯಲ್ಲಿ ಬಿಲ್ಲವ ಭಾಂದವರ ಸಮಾಲೋಚನಾ ಸಭೆ ಮತ್ತು ತಾಲೂಕು ಸಮಿತಿ ರಚನೆ ಸೆ. 27ರಂದು ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಂಜೆ 4ಕ್ಕೆ ನಡೆಯಲಿದೆ.
ತುಳುನಾಡಿನ ಕಾರಣಿಕ ಶಕ್ತಿಗಳಾದ ಕೋಟಿ ಚೆನ್ನಯರ ಮೂಲಸ್ಥಾನವಾದ ಪುತ್ತೂರು ತಾಲೂಕಿನ ಪಡುಮಲೆಯ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಪುನರುತ್ತಾನ ಪರ್ವಕ್ಕೆ ಚಾಲನೆ ನೀಡಲಾಗಿದೆ. 2006 ಜನವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಳ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಪ್ರಾಯಶ್ಚಿತ್ತಾದಿ ವಿಧಿವಿಧಾನಗಳನ್ನು ನಡೆಸಲಾಗಿದ್ದು ಪವಿತ್ರ ತೀರ್ಥಭಾವಿಯ ಮರು ನಿರ್ಮಾಣದ ಮೂಲಕ ಗಂಗಾದರ್ಶನ ಪಡೆಯಲಾಗಿದೆ. 29ರಂದು ಮೂಲಸ್ಥಾನ ಗರಡಿ ಗುರುಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದಿತಿಯ ಧರ್ಮ ಚಾವಡಿ ನಿರ್ಮಾಣಕ್ಕೆ ಶಿಲಾಪೂಜಾನ ನೆರವೇರಿಸಲಾಗಿದೆ. ಜನವರಿ 2017ರಂದು ಶಿಲಾನ್ಯಾಸ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದ್ದು ಬಿಲ್ಲವರ ಸಮಾಜದ ಪಾಲಿನ ಮೂಲ ಕ್ಷೇತ್ರದ ನಿರ್ಮಾಣ ಮಹಾಕಾರ್ಯಕ್ಕೆ ಮುಂದಡಿ ಇಡಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ನಾನಾ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸುವ ಪ್ರಕ್ರಿಯೆ ಆರಮಭಗೊಂಡಿದೆ. ಆದ್ದರಿಂದ ತಾಲೂಕು ಮಟ್ಟದ ಗ್ರಾಮ ಸಮಿತಿ ರಚಿಸುವ ಸಂಬಂಧ ಬಿಲ್ಲವ ಸಮಾಜ ಬಾಂಧವರ ಸಮಾಲೋಚನ ಸಭೆಯನ್ನು ಕರೆಯಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂರಕ ಸಮಿತಿಗಳ ರಚನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.