‘ವಿಶ್ವಾಸದಮನೆ’ಯಿಂದ ಮನೆಗೆ ತೆರಳಿದ ತಾಯಿ- ಮಗು
ಉಡುಪಿ, ಅ.13: ಮಾನಸಿಕ ಅಸ್ವಸ್ಥೆಯಾಗಿ ತನ್ನ ಮಗುವಿನೊಂದಿಗೆ ಬೀದಿ ಬದಿ ಅಲೆದಾಡುತ್ತಿದ್ದ ಬಿಹಾರದ ಮಹಿಳೆ ವಿಶ್ವಾಸದ ಮನೆಯ ಆರೈಕೆಯಿಂದ ಗುಣಮುಖರಾಗಿ ತನ್ನ ಮನೆಗೆ ಮರಳಿದ್ದಾರೆ.
ತೆಂಕ ಎರ್ಮಾಳು ಬಳಿ ಸೆ.27ರಂದು ಒಂದು ಮಗುವನ್ನು ಹಿಡಿದು ಕೊಂಡು ಮಾನಸಿಕ ಅಸ್ವಸ್ಥರಾಗಿ ಅಲೆದಾಡುತ್ತಿದ್ದ ಮಹಿಳೆಯನ್ನು ಪಡುಬಿದ್ರಿ ಪೊಲೀಸ್ ಠಾಣೆಯವರು ಮಾನವೀಯತೆಯ ದೃಷ್ಟಿಯಿಂದ ಶಂಕರಪುರದ ವಿಶ್ವಾಸದಮನೆಗೆ ಸೇರಿದರು. ಊರು ಹೆಸರು ಯಾವುದು ನೆನಪಿಲ್ಲದ ಆ ಮಹಿಳೆಗೆ ವಿಶ್ವಾಸದ ಮನೆಯ ಪಾ.ಸುನಿಲ್ ಡಿಸೋಜ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಿ ಮಗುವಿನ ಆರೈಕೆ ಮಾಡಲಾಯಿತು.
ನಂತರ ಒಂದು ವಾರದೊಳಗೆ ಚೇತರಿಸಿಕೊಂಡ ಮಹಿಳೆ ನನ್ನ ಹೆಸರು ಮಾಲತಿ ದೇವಿ, ನಾನು ಬಿಹಾರ್ ಮೂಲದವಳು ಎಂದು ತಿಳಿಸಿದರು. ಅವರು ಮನೆಗೆ ಹೋಗುವ ಬಯಕೆಯನ್ನು ವ್ಯಕ್ತಪಡಿಸಿದರು. ಆ ಹಿನ್ನೆಲೆ ಯಲ್ಲಿ ವಿಶ್ವಾಸದಮನೆಯವರು ಬಿಹಾರ್ ಪೋಲಿಸ್ ಠಾಣೆಯನ್ನು ಸಂಪರ್ಕಿಸಿ ಮಾಲತಿ ದೇವಿಯ ವಿಳಾಸವನ್ನು ಪತ್ತೆ ಹಚ್ಚಿದರು.
ಮಾಲತಿ ದೇವಿಯ ಪತಿ ಮುಖೇಶ್ ಹಾಗೂ ಸಂಬಂಧಿಕರು ಅ.11 ರಂದು ವಿಶ್ವಾಸದಮನೆಗೆ ಆಗಮಿಸಿದರು. ‘ಮಾಲತಿ ದೇವಿ ಮನೆ ಬಿಟ್ಟು 3 ತಿಂಗಳಾಗಿದ್ದು, ಆಕೆ ಹೆರಿಗೆಯಾದ ನಂತರ ಮಾನಸಿಕ ತೊಂದರೆಗೆ ಒಳಗಾಗಿದ್ದರು. ಈಕೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ನಂತರ ಆಕೆ ಮನೆಯಿಂದ ನಾಪತ್ತೆಯಾಗಿದ್ದಳು ಎಂದು ಮುಖೇಶ್ ತಿಳಿಸಿದರು. ಬಳಿಕ ಅವರು ತನ್ನ ಪತ್ನಿ ಹಾಗೂ ಮಗುವನ್ನು ಜೊತೆಯಲ್ಲಿ ಊರಿಗೆ ಕರೆದು ಕೊಂಡು ಹೋದರು.