ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರ ಮೇಲೆ ಹಲ್ಲೆ ಖಂಡನೀಯ: ಐವನ್
ಮಂಗಳೂರು,ಅ.23:ನಗರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ನಡೆದ ಹಲ್ಲೆ ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ಆ ವಿದ್ಯಾರ್ಥಿಯ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಆಗ್ರಹಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಮೇಲೆ ವಿದ್ಯಾರ್ಥಿ ನಡೆಸಿದ ಹಲ್ಲೆ ಇಡೀ ಶಿಕ್ಷಿತ ಸಮಾಜಕ್ಕೆ ಕಳಂಕವಾಗಿದೆ. ವಿದ್ಯಾರ್ಥಿ ಕ್ಷುಲ್ಲಕ ಕಾರಣಕ್ಕಾಗಿ ಪ್ರಾಂಶುಪಾಲರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವುದು ಶಿಕ್ಷಾರ್ಹ ಅಪರಾಧ. ಘಟನೆ ನಡೆದ ದಿನವೇ ಪ್ರಾಂಶುಪಾಲರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೇನೆ. ಈ ಬಗ್ಗೆ ಪೊಲೀಸರ ಜತೆ ಮಾತುಕತೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದರು.
ವಿದ್ಯೆ ಕಲಿಸಿದ ಗುರುಗಳಿಗೆ ಅಡ್ಡಗಟ್ಟಿ ಹಲ್ಲೆ ನಡೆಸುವುದು ವಿದ್ಯಾರ್ಥಿಯ ಒಳ್ಳೆಯ ಲಕ್ಷಣವಲ್ಲ. ಇದು ಸಮಾಜದ ಅಘಾತಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ ಈ ಕೃತ್ಯ ನಡೆಸಿದ ವಿದ್ಯಾರ್ಥಿಗೆ ಯಾರು ಕೂಡಾ ಬೆಂಬಲ ನೀಡಬಾರದು. ಇಡೀ ಸಮಾಜ ಇಂತಹವರಿಗೆ ಛೀಮಾರಿ ಹಾಕಿದಾಗ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಟಿಪ್ಪು ಜಯಂತಿ ಆಚರಣೆ ಮಾಡುವುದು ಸರಕಾರದ ನಿರ್ಧಾರ. ಸರಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡದೇ ಈ ಬಾರಿಯೂ ಆಚರಣೆ ನಡೆಯುತ್ತದೆ. ಆಚರಣೆಗೆ ಅಡ್ಡಿ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.