ಕೆರೆಗೆ ಬಿದ್ದು ಮನೆಯ ಯಜಮಾನ, ಕೆಲಸದಾಕೆ ಮೃತ್ಯು
ಬೆಳ್ತಂಗಡಿ, ಅ.23: ಆಕಸ್ಮಿಕವಾಗಿ ಕೆರೆಗೆ ಬಿದ್ದು ಮನೆಯೊಡೆಯ ಹಾಗೂ ಕೆಲಸದಾಕೆ ಇಬ್ಬರು ಮೃತಪಟ್ಟ ಘಟನೆ ಉಜಿರೆ ಸನಿಹದ ನಿಡ್ಗಲ್ನ ಗುರಿಪಳ್ಳ ಎಂಬಲ್ಲಿ ರವಿವಾರ ನಡೆದಿದೆ.
ಅಂಬಟೆ ಬೆಟ್ಟು ಮನೆಯ ಕೃಷಿಕ ನಾವಳೆ ರಾಮಚಂದ್ರ ಹೆಬ್ಬಾರ್(76) ಹಾಗೂ ಮನೆಯ ಕೆಲಸದಾಕೆ ಸಂಧ್ಯಾ(35) ಎಂಬುವರೇ ನೀರಲ್ಲಿ ಮುಳುಗಿ ಮೃತಪಟ್ಟವರು.
ಹೆಬ್ಬಾರ್ ಅವರು ತಮ್ಮ ತೋಟದಲ್ಲಿದ್ದ ಕೆರೆಯಿಂದ ನೀರೆತ್ತಲು ಪಂಪ್ ಅಳವಡಿಸಿದ್ದರು. ಪಂಪ್ ನೀರೆಳೆಯದ ಹಿನ್ನೆಲೆಯಲ್ಲಿ ಅದರ ಫುಟ್ವಾಲ್ವ್ನಲ್ಲಿ ಕೆಲಸದಾಕೆ ನೀರು ತುಂಬಿಸುತ್ತಿದ್ದಾಗ ಅಕಸ್ಮಾತ್ತಾಗಿ ಜಾರಿ ಕೆರೆಗೆ ಬಿದ್ದರು. ಇದನ್ನು ನೋಡುತ್ತಿದ್ದ ರಾಮಚಂದ್ರ ಹೆಬ್ಬಾರ್ ಅವರು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದು, ಅವರೂ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದರು. ಕೆರೆಯಲ್ಲಿ ಭಾರೀ ಕೆಸರು ತುಂಬಿದ್ದರಿಂದ ಇಬ್ಬರೂ ನೀರಿನಿಂದ ಹೊರಗೆ ಬರಲಾಗದೆ ಕೆಸರಿನಲ್ಲಿ ಸಿಲುಕಿಕೊಂಡು ಮುಳುಗಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರು ಸೇರಿ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಮೃತ ಹೆಬ್ಬಾರ್ ಅವರು ನಿಡ್ಗಲ್ ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿದ್ದರು. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.