ರಸ್ತೆ ದುರಸ್ತಿಗೆ ಆಗ್ರಹ ಇಂದು ಸುರತ್ಕಲ್ ಸಂಚಾರ ಬಂದ್
ಸುರತ್ಕಲ್, ಅ.25: ಸುರತ್ಕಲ್-ಕಾನ ಎಂಆರ್ಪಿಎಲ್ ರಸ್ತೆ ದುರಸ್ತಿಗೆ ಆಗ್ರಹಿಸಿ ಅ.26ರಂದು ಸುರತ್ಕಲ್ ಕಾನ ಹೊರಾಟ ಸಮಿತಿ ಕರೆ ನೀಡಿರುವ ಬಂದ್ಗೆ ವ್ಯಾಪಾರಿಗಳು, ಬಸ್ ಮಾಲಕರು, ಚಾಲಕರು ಹಾಗೂ ನಿರ್ವಾಹಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಸ್ ಸಂಚಾರ ಬಂದ್: ಬುಧವಾರ ಬೆಳಗ್ಗಿನಿಂದ ಸುರತ್ಕಲ್-ಕೃಷ್ಣಾಪುರ- ಕಾನ ಮಾರ್ಗವಾಗಿ ಸಂಚರಿಸುವ ಬಸ್ಗಳು ಸಂಚಾರ ಮೊಟಕುಗೊಳಿಸಲಿವೆ. ಮಂಗಳೂರು- ಕಾಟಿಪಳ್ಳ, ಕೃಷ್ಣಾಪುರ, ಕಾನ, ಎಂಆರ್ಪಿಎಲ್ ಭಾಗಗಳಿಗೆ ತೆರಳುವ ಬಸ್ಗಳು ಮಂಗಳೂರಿನಿಂದ ಸುರತ್ಕಲ್ ಸಿಟಿ ಬಸ್ ನಿಲ್ದಾಣದವರೆಗೆ ಮಾತ್ರ ಚಲಿಸಲಿದೆ. ಆ ಬಳಿಕದ ಮುಂದಿನ ಪ್ರಯಾಣವನ್ನು ಮೊಟಕುಗೊಳಿಸುವುದಾಗಿ ಬಸ್ ಮಾಲಕರು ಸ್ಪಷ್ಟಪಡಿಸಿದ್ದು, ಈ ಸಂಬಂಧ ಬಸ್ಗಳಲ್ಲಿ ಬಂದ್ನ ಪೋಸ್ಟರ್ಗಳನ್ನು ಹಾಕಿದ್ದಾರೆ.
ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚುವ ಮೂಲಕ ನಾಗರಿಕ ಹೋರಾಟ ಸಮಿತಿಯ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಲಾಗುವುದು ಎಂದು ಮಾರ್ಕೆಟ್ ವ್ಯಾಪಾರಿಗಳು ತಿಳಿಸಿ ಅಂಗಡಿಯಲ್ಲಿ ‘ನಾಳೆ ಬಂದ್’ ಬಂಟಿಂಗ್ಸ್ನ್ನು ಅಂಟಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಸುರತ್ಕಲ್-ಕಾನಾ ಎಂಆರ್ಪಿಎಲ್ ಹೋರಾಟ ಸಮಿತಿ ಹಮ್ಮಿಕೊಂಡಿರುವ ‘ಸಂಚಾರ ಬಂದ್’ ಹೋರಾಟವು ಸಂಪೂರ್ಣ ಯಶಸ್ವಿಯಾಗುವ ಎಲ್ಲಾ ಮುನ್ಸೂಚನೆಗಳು ಲಭಿಸಿವೆ.