ಮನಪಾ, ಒಣ ಕಸ ಸಂಗ್ರಹ ವಾಹನಗಳಿಗೆ ಚಾಲನೆ
ಮಂಗಳೂರು, ಅ.26: ಮಂಗಳೂರು ನಗರ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಸ್ತುಗಳ ಸಂಸ್ಕರಣೆ ಮತ್ತು ನಿರ್ವಹಣೆಗಾಗಿ ನೂತನ ಏಳು ಒಣಕಸ ಸಂಗ್ರಹಣಾ ವಾಹನಗಳಿಗೆ ಮಹಾನಗರ ಪಾಲಿಕೆ ಕಚೇರಿ ಎದುರು ಮೇಯರ್ ಹರಿನಾಥ್ ಇಂದು ಚಾಲನೆ ನೀಡಿದರು.
ಪ್ರಸ್ತುತ ನಡೆಯುತ್ತಿರುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ಕಸಗಳನ್ನು ಸಂಗ್ರಹ ಹಿಂದಿನಂತೆ ವಾರದ ಏಳೂ ದಿನಗಳೂ ನಡೆಯಲಿದ್ದು, ಒಣಕಸ ಸಂಗ್ರಹ ಆಯಾ ವಾರ್ಡ್ಗಳಿಗೆ ನಿಗದಿಪಡಿಸಲಾದಂತೆ ವಾರಕಕೊಮ್ಮೆ ನೂತನ ವಾಹನಗಳು ಸಂಚರಿಸಿ ಸಂಗ್ರಹ ಮಾಡಲಿವೆ ಎಂದು ಮೇಯರ್ ಹರಿನಾಥ್ ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಣಕಸವನ್ನು ಸಂಗ್ರಹಿಸಲು ವಾರದಲ್ಲಿ ಒಂದು ದಿನ ಪ್ರತ್ಯೇಕ ಹಳದಿ ಬಣ್ಣದ ಒಣಕಸ ಸಂಗ್ರಹಣಾ ವಾಹನ ಬರಲಿದೆ. ಈ ನೂತನ ವ್ಯವಸ್ಥೆಯನ್ನು ಸಾರ್ವಜನಿಕರು ಸಂಪೂರ್ಣವಾಗಿ ಬಳಸಿಕೊಂಡು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇ ಮಾಡುವ ಪಾಲಿಕೆಯ ಕಾರ್ಯದಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಪೌರ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ನಿಯಮ 2016ರ ನಿರ್ದೇಶದನ್ವಯ ನಗರವನ್ನು ಸ್ವಚ್ಛ, ಸುಂದರ ಮತ್ತು ಹಸಿರು ನಗರವನ್ನಾಗಿಸಲು ಮೊದಲ ಹಂತದಲ್ಲಿ ಘನತ್ಯಾಜ್ಯವನ್ನು 2 ವಿಧದಲ್ಲಿ ವಿಂಗಡಿಸಬೇಕಾಗಿದೆ. ಈಗಾಗಲೇ ಪಾಲಿಕೆಯಲ್ಲಿ ಇ-ತ್ಯಾಜ್ಯ ಸಂಗ್ರಹೆಗೆ ಅವಕಾಶ ಕಲ್ಪಿಸಿದ್ದು ಮುಂದಿನ ಹಂತದಲ್ಲಿ ಈ ಬಗ್ಗೆಯೂ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ ಎಂದರು.
ನಾಗರಿಕರಿಗೆ ಸೂಚನೆ
* ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪ್ರತ್ಯೇಕವಾಗಿ ಇರಿಸಬೇಕು. ಹಸಿಕಸವನ್ನು ದಿನನಿತ್ಯ ಸಂಗ್ರಹಣೆ ನೀಡಬೇಕಾಗಿದ್ದು ಒಣಕಸವನ್ನು ವಾರದಲ್ಲಿ ಒಂದು ದಿನ ಬರುವ ಹಳದಿ ಬಣ್ಣದ ವಾಹನಕ್ಕೆ ನೀಡಬೇಕು.
* ಒಣಕಸಗಳಾದ ಪ್ಲಾಸ್ಟಿಕ್ ಕವರ್, ಹಾಲಿನ ಕವರ್, ಚಾಕಲೇಟ್ ಹೊದಿಕೆ, ಕಾಗದ ವಸ್ತುಗಳು, ಲೋಹ ಮತ್ತು ಗಾಜು, ಡಬ್ಬಿ, ರಬ್ಬರ್, ಕಟ್ಟಿಗೆ ತುಂಡು, ತೆಂಗಿನಕಾಯಿ ಗೆರಟೆ, ಹಳೆ ಬಟ್ಟೆ, ಗುಡಿಸಿದ ದೂಳು, ಶೃಂಗಾರ ಸಾಮಗ್ರಿಗಳು, ಪಿಂಗಾಣಿ ವಸ್ತುಗಳು ಇತ್ಯಾದಿಯನ್ನು ಒಣಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು.
* ಹಸಿಕಸಗಳಾದ ಅಡುಗೆ ಮನೆ ತ್ಯಾಜ್ಯ, ತರಕಾರಿ, ಹಣ್ಣು ಆಹಾರ, ಸಿದ್ದಾಹಾರ, ಕೋಳಿ ಮೀನು, ಕೊಳೆತ ತರಕಾರಿ ಮತ್ತು ಹಣ್ಣು, ಟಿಶ್ಯು ಪೇಪರ್, ಬಾಳೆ ಎಲೆ ಇತ್ಯಾದಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸದೆ ನೇರವಾಗಿ ಹಾಕಬೇಕು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್ ಮಾಹಿತಿ ನೀಡಿದರು.
ಕಸ ಸಂಗ್ರಹದ ಬಗ್ಗೆ ದೂರುಗಳಿದ್ದರೆ ಕರೆ ಮಾಡಿ
ಕಸ ಸಂಗ್ರಹಣಾ ವಾಹನಗಳು ರಸ್ತೆಯಲ್ಲಿ ಬೇಕಾಬಿಟ್ಟಿ ನಿಲ್ಲಿಸಿ ಸಂಚಾರ ಅಡಚಣೆ ಮಾಡುವ ಅಥವಾ ತ್ಯಾಜ್ಯ ಸಂಗ್ರಹಿಸುವ ಕಾರ್ಮಿಕರ ಕುರಿತಾದ ದೂರುಗಳನ್ನು ಸ್ವೀಕರಿಸಲು ಪಾಲಿಕೆ ಕಚೇರಿಯಲ್ಲಿ ತೆರೆದಿರುವ ದೂರವಾಣಿ ಸಂಖ್ಯೆ 0824-4232666 ಅಥವಾ ವಾಟ್ಸಾಪ್ ನಂಬರ್ 7022977557 ಗೆ ಮಾಹಿತಿ ನೀಡಬಹುದಾಗಿದೆ. ಈ ಕುರಿತು ಪಾಲಿಕೆ ವತಿಯಿಂದ ತ್ಯಾಜ್ಯ ನಿರ್ವಹಣಾ ಕಂಪೆನಿ ಪ್ರಮುಖರಿಗೆ ತಿಳಿಸಲಾಗುವುದು ಎಂದು ಪಾಲಿಕೆಯ ಪರಿಸರ ಅಭಿಯಂತರ ಮಧು ತಿಳಿಸಿದರು.
*ಒಣಕಸ ಸಂಗ್ರಹ ವಾಹನಗಳು ವಿವಿಧ ವಾಡುಗಳಲ್ಲಿ ಸಂಚರಿಸುವ ವೇಳಾಪಟ್ಟಿ
ಸೋಮವಾರ: ಉತ್ತರ ವಲಯದ ಸುರತ್ಕಲ್ ಪಶ್ಚಿಮ, ಸುರತ್ಕಲ್ ಪೂರ್ವ, ಕಾಟಿಪಳ್ಳ ಪೂರ್ವ, ಕಾಟಿಪಳ್ಳ ಕೃಷ್ಣಾಪುರ ಮತ್ತು ದಕ್ಷಿಣ ವಲಯದ ಪದವು ಪಶ್ಚಿಮ, ಪದವು ಸೆಂಟ್ರಲ್, ಪದವು ಪೂರ್ವ, ಕದ್ರಿ ದಕ್ಷಿಣ, ಶಿವಭಾಗ್
ಮಂಗಳವಾರ: ಉತ್ತರ ವಲಯದ ಕಾಟಿಪಳ್ಳ ಉತ್ತರ, ಇಡ್ಯಾ ಪೂರ್ವ, ಇಡ್ಯಾ ಪಶ್ಚಿಮ, ಹೊಸಬೆಟ್ಟು ಮತ್ತು ದಕ್ಷಿಣ ವಲಯದ ಪೋರ್ಟ್, ಕಂಟೋನ್ಮೆಂಟ್, ಅತ್ತಾವರ, ಮಂಗಳಾದೇವಿ, ಹೊಯ್ಗೆ ಬಜಾರ್, ಬೋಳಾರ, ಬಂದರ್
ಬುಧವಾರ: ಉತ್ತರ ವಲಯದ ಕುಳಾಯಿ, ಬೈಕಂಪಾಡಿ, ಪಣಂಬೂರು, ಬೆಂಗ್ರೆ ಮತ್ತು ದಕ್ಷಿಣ ವಲಯದ ಮರೋಳಿ, ಕಂಕನಾಡಿ, ಅಳಪೆ ದಕ್ಷಿಣ, ಅಳಪೆ ಉತ್ತರ, ಕಣ್ಣೂರು, ಬಜಾಲ್
ಗುರುವಾರ: ಉತ್ತರ ವಲಯದ ಪಂಜಿಮೊಗರು, ಮರಕಡ, ಕುಂಜತ್ತಬೈಲ್ ದಕ್ಷಿಣ, ಬಂಗ್ರಕೂಳೂರು, ದೇರೆಬೈಲ್ ಉತ್ತರ, ದೇರೆಬೈಲ್ ಪಶ್ಚಿಮ ಮತ್ತು ದಕ್ಷಿಣ ವಲಯದ ಜಪ್ಪಿನಮೊಗರು, ಕಂಕನಾಡಿ ವೆಲೆನ್ಸಿಯಾ, ಜೆಪ್ಪು, ಬೆಂದೂರ್, ಪಳ್ನೀರ್, ಮಿಲಾಗ್ರಿಸ್.
ಶುಕ್ರವಾರ: ಉತ್ತರ ವಲಯದ ದೇರೆಬೈಲ್ ಪೂರ್ವ, ಕುಂಜತ್ತಬೈಲ್ ಉತ್ತರ, ಕಾವೂರು, ಪಚ್ಚನಾಡಿ, ತಿರುವೈಲ್ ಮತ್ತು ದಕ್ಷಿಣ ವಲಯದ ದೇರೆಬೈಲ್ ದಕ್ಷಿಣ, ಕದ್ರಿ ಪದವು, ಬಿಜೈ, ಕದ್ರಿ ಉತ್ತರ
ಶನಿವಾರ: ಉತ್ತರ ವಲಯದ ದೇರೆಬೈಲ್ ನೈಋತ್ಯ, ಬೋಳೂರು, ಮಣ್ಣಗುಡ್ಡ, ಕಂಬ್ಲ, ಕೊಡಿಯಾಲಬೈಲ್, ಕುದ್ರೋಳಿ ಮತ್ತು ದಕ್ಷಿಣ ವಲಯದ ಕೋರ್ಟ್, ಸೆಂಟ್ರಲ್ ಮಾರ್ಕೆಟ್, ಡೊಂಗರಕೇರಿ.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.