ಟಿಪ್ಪು ಜಯಂತಿ ಆಚರಣೆಗೆ ವಿರೋಧ
ಉಡುಪಿ, ನ.5: ರಾಜ್ಯ ಸರಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನೀಡಿರುವ ಆದೇಶವನ್ನು ಉಡುಪಿ ಜಿಲ್ಲಾ ಟಿಪ್ಪು ಜಯಂತಿ ವಿರೋಧ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸಿದೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಕೆ.ಆರ್.ಸುನೀಲ್, ಕಳೆದ ಬಾರಿ ಸರಕಾರ ಟಿಪ್ಪು ಜಯಂತಿ ಆಚರಿಸಿದ ಪರಿಣಾಮ ಸಾರ್ವಜನಿಕ ಶಾಂತಿಭಂಗ, ಜೀವಹಾನಿಗಳು ಸಂಭವಿಸಿ ಹಲವು ಜಿಲ್ಲೆಗಳಲ್ಲಿ ಗಲಭೆಗಳು ನಡೆದಿವೆ. ಈ ವರ್ಷ ಮತ್ತೆ ಟಿಪ್ಪು ಜಯಂತಿ ಆಚರಿಸಿದರೆ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದೀತು ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮೂಲಕ ಟಿಪ್ಪು ಜಯಂತಿ ಆಚರಿಸದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಆದು ದರಿಂದ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಬಾರದು. ಆಚರಿಸಿದ್ದೇ ಆದಲ್ಲಿ ಅದರ ವಿರುದ್ಧ ಉಡುಪಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಹಸಂಚಾಲಕರಾದ ಶ್ರೀಶ ನಾಯಕ್, ಪ್ರಸಾದ್, ವಿಎಚ್ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಪ್ರಕಾಶ್ ಕುಕ್ಕೆಹಳ್ಳಿ, ಬಜರಂಗದಳ ಸಂಚಾಲಕ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.