ನ.14: ಡಾ. ಕಾರಂತರ ಬಾಲವನದಲ್ಲಿ ‘ಚಿಲಿಪಿಲಿ’ ಮಕ್ಕಳ ಕೂಟ
ಪುತ್ತೂರು, ನ.11: ಡಾ.ಶಿವರಾಮ ಕಾರಂತರ ಬಾಲವನ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನ.14ರಂದು ಪರ್ಲಡ್ಕದ ಬಾಲವನದಲ್ಲಿ ಡಾ.ಕಾರಂತರ ಮೂಲ ಪರಿಕಲ್ಪನೆಯ ‘ಚಿಲಿಪಿಲಿ’ ಮಕ್ಕಳ ಕೂಟವನ್ನು ಆಯೋಜಿಸಲಾಗಿದೆ ಎಂದು ಮಕ್ಕಳ ಕೂಟದ ನಿರ್ದೇಶಕರಾದ ಸಹಾಯಕ ಆಯುಕ್ತ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ದಿನಪೂರ್ತಿ ನಡೆಯುವ ಈ ಕಾರ್ಯಕ್ರಮದಲ್ಲಿ ತಾಲೂಕಿನ ಶಾಲೆಗಳ 240 ವಿದ್ಯಾರ್ಥಿಗಳು ರಂಗೂಮಿ, ಸಂಗೀತ, ಚಿತ್ರಕಲೆ, ಕೊಲಾಜ್, ವಾಚನ, ಬರಹ ಮತ್ತು ಆವೆಮಣ್ಣಿನ ಆಕೃತಿ ರಚನೆಯಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳ ಹಬ್ಬಕ್ಕೆ ಬಾಲವನ ಸಮಿತಿ ಅಧ್ಯಕ್ಷರಾದ ಸಹಾಯಕ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ನಡೆಯುವ ರಂಗಾಧಿವೇಶನದಲ್ಲಿ ಶಾಸಕಿ ಹಾಗೂ ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರ ಸಭಾಧ್ಯಕ್ಷೆ ಭವಾನಿ ಚಿದಾನಂದ ಮತ್ತು ಸಹಾಯಕ ಪೊಲೀಸ್ ಅಧೀಕ್ಷಕ ರಿಷ್ಯಂತ್ ಪಿ.ಬಿ. ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಕಾರಂತರ ನಿವಾಸ ಕಾಮಗಾರಿ ಪೂರ್ಣ
ಬಾಲವನದಲ್ಲಿನ ಡಾ.ಕಾರಂತರ ನಿವಾಸ ಪುನಶ್ಚೇತನ ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್ ತಿಂಗಳಲ್ಲಿ ಆ ಮನೆಯನ್ನು ಕಾರಂತರ ಜೀವನ ಶೈಲಿ ವಸ್ತು ಸಂಗ್ರಹಾಲಯವಾಗಿ ಲೋಕಾರ್ಪಣೆ ಮಾಡಲಾಗುವುದು. ಕಾರಂತರ ನಾಟ್ಯಾಲಯ ಮತ್ತು ಆಧ್ಯಯನ ಕೊಠಡಿ ದುರಸ್ತಿಗೆ ಸಂಬಂಧಿಸಿ ನೀಲಿ ನಕಾಶೆ ತಯಾರು ಪಡಿಸಿ ಕಾಮಗಾರಿ ಮಂಜೂರಾತಿಗೆ ರಾಜ್ಯ ಸಮಿತಿಗೆ ಒಪ್ಪಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.