ನಿಟ್ಟೆ: ಏಜ್ ಡೀಮಿಸ್ಟಿಫೈಡ್-ಫೋರೆನ್ಸಿಕ್ ಇನ್ಸೈಟ್ ಕಾರ್ಯಾಗಾರ
ಉಳ್ಳಾಲ, ನ.16: ದಂತ ವಿಜ್ಞಾನ ವಿಭಾಗ ಕಾನೂನಿನ ಜತೆಗೆ ವ್ಯವಹರಿಸುವ ಮೂಲಕ ನ್ಯಾಯ ದಂತಶಾಸ್ತ್ರ (ಫಾರೆನ್ಸಿಕ್ ಓಡೊಂಟಾಲಜಿ) ಕಾರ್ಯಾಚರಿಸುತ್ತಿದ್ದು, ಈ ಮೂಲಕ ಸುಮಾರು 60-70 ವರ್ಷಗಳಿಂದ ಹಲವು ಪ್ರಕರಣಗಳ ಭೇದಿಸುವಿಕೆಯ ಕಾರ್ಯ ವಿಭಾಗದಿಂದ ನಡೆಯುತ್ತಾ ಬಂದಿದೆ ಎಂದು ಧಾರವಾಡದ ಎಸ್ಡಿಎಂ ದಂತ ವಿಜ್ಞಾನ ಕಾಲೇಜಿನ ಫೊರೆನ್ಸಿಕ್ ಆಡಂಟಾಲಜಿ ವಿಭಾಗ ಮುಖ್ಯಸ್ಥ ಡಾ.ಆಶೀತ್.ಬಿ.ಆಚಾರ್ಯ ಅಭಿಪ್ರಾಯಪಟ್ಟರು. ನಿಟ್ಟೆ ವಿವಿ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ, ಪ್ಯಾಥಲಾಜಿ ಮತ್ತು ಮೈಕ್ರೋಬಯಾಲಜಿ ವಿಭಾಗ ಮತ್ತು ಇಂಟರ್ನ್ಸ್ ಅಕಾಡಮಿಕ್ ಕ್ಲಬ್ ಇವುಗಳ ಆಶ್ರಯದಲ್ಲಿ ದೇರಳಕಟ್ಟೆ ಕಾಲೇಜಿನ ವಿಂಶತಿ ಭವನ ದಲ್ಲಿ ಆಯೋಜಿಸಲಾದ ಏಜ್ ಡೀಮಿಸ್ಟಿಫೈಡ್-ಫಾರೆನ್ಸಿಕ್ ಇನ್ಸೈಟ್ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗ ಮುಖ್ಯಸ್ಥ ಪ್ರೊ. ಮಹಾಬಲೇಶ್ ಶೆಟ್ಟಿ ಮಾತನಾಡಿ, ಭಾರತದ ದಂತ ವೈದ್ಯರು ದಾಖಲೆಗಳನ್ನು ಇಡುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಕನಿಷ್ಠ ನಾಪತ್ತೆಯಾದವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದಾಗ ದಂತ ವಿಭಾಗದ ದಾಖಲೆಗಳನ್ನಾಧರಿಸಿ ಗುರುತು ಪತ್ತೆಹಚ್ಚುವಿಕೆ ಸುಲಭವಾಗಿ ಸಾಧ್ಯ ಎಂದರು.
ಸ್ಥಾಪಕ ಡೀನ್ ಹಾಗೂ ಕ್ಯಾಡ್ಸ್ ನಿರ್ದೇಶಕ ಡಾ.ಎನ್.ಶ್ರೀಧರ್ ಶೆಟ್ಟಿ, ಸ್ನಾತಕೋತ್ತರ ಕಲಿಕಾ ವಿಭಾಗಗಳ ನಿರ್ದೇಶಕ ಡಾ.ಬಿ.ರಾಜೇಂದ್ರ ಪ್ರಸಾದ್, ಓರಲ್ ಮೆಡಿಸಿನ್ ಮತ್ತು ರೇಡಿಯೋಲಾಜಿ ವಿಭಾಗ ಮುಖ್ಯಸ್ಥ ಡಾ.ಜಿ.ಸುಭಾಷ್ ಬಾಬು, ಓರಲ್ ಪ್ಯಾಥಲಾಜಿ ಮತ್ತು ಮೈಕ್ರೋಬಯಾಲಾಜಿ ಮುಖ್ಯಸ್ಥ ಡಾ.ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಎ.ಬಿ.ಶೆಟ್ಟಿ ದಂತ ಮಹಾ ವಿದ್ಯಾಲಯದ ಡೀನ್ ಯು.ಎಸ್.ಕೃಷ್ಣ ನಾಯಕ್ ಸ್ವಾಗತಿಸಿದರು. ಏಬಲ್ ಕಾರ್ಯಕ್ರಮ ನಿರೂಪಿಸಿದರು.