ಸಿಂಧಿ ಫೆಡರೇಶನ್ ಆಫ್ ಸೌತ್ ಇಂಡಿಯಾದ ಅಧ್ಯಕ್ಷರಾಗಿ ಮಂಗಳೂರಿನ ಉದ್ಯಮಿ ಮುರಳೀಧರ್ ಆಯ್ಕೆ
ಮಂಗಳೂರು, ನ.21: ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ, ಉದ್ಯಮಿ ಮುರಳೀಧರ್ ಕೆ.ರಮಣಿಯವರು ಸಿಂಧಿ ಫೆಡರೇಶನ್ ಆಫ್ ಸೌತ್ ಇಂಡಿಯಾ(ಎಸ್ಎಫ್ಒಎಸ್ಐ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ನಡೆದ ಎಸ್ಎಫ್ಒಎಸ್ಐ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಇದೇ ಸಂದರ್ಭ ಸಿಂಧಿ ಸಮುದಾಯಕ್ಕೆ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ಮುರಳೀಧರ್ರಿಗೆ ಎಸ್ಎಫ್ಒಎಸ್ಐ ‘ಸಿಂಧು ರತ್ನ ’ಪ್ರಶಸ್ತಿ ನೀಡಿ ಗೌರವಿಸಿದೆ.
ಇಪ್ಪತ್ತೆಂಟು ವರ್ಷಗಳ ಹಿಂದೆ ದಕ್ಷಿಣ ಭಾರತದ ತಮಿಳುನಾಡು,ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕದಲ್ಲಿ ಸಿಂಧಿ ಸಮುದಾಯ ಜನರನ್ನು ಸಂಘಟಿಸಲು ಹುಟ್ಟಿಕೊಂಡ ಎಸ್ಎಫ್ಒಎಸ್ಐಗೆ ಬಳಿಕ ಗೋವಾ ಸೇರ್ಪಡೆಯಾಗಿದೆ. ಈ ಒಕ್ಕೂಟವು ಸಿಂಧಿ ಭಾಷೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೋತ್ಸಾಹ ಹಾಗೂ ಸಮುದಾಯ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.