ದಲಿತ, ವಿದ್ಯಾರ್ಥಿ ಚಳವಳಿ ಹತ್ತಿಕ್ಕಲು ಕೇಂದ್ರದಿಂದ ಸಿವಿಲ್ ಕೋಡ್ ಚರ್ಚೆ : ಮುಹಮ್ಮದ್ ಕುಂಞಿ
ಮಂಗಳೂರು, ನ.22: ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸಂಘಪರಿವಾರದ ರಾಜಕೀಯ ಅಜೆಂಡವಾಗಿದೆ. ಮೋದಿ ಸರಕಾರ ಬ್ರಿಟಿಷರಂತೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಜಮಾಅತೇ ಇಸ್ಲಾಮೀ ಹಿಂದ್ನ ಅಧ್ಯಕ್ಷ ಮುಹಮ್ಮದ್ ಕುಂಞಿ ಆರೋಪಿಸಿದ್ದಾರೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ಇಂದು ನಡೆದ ಬೃಹತ್ ಶರೀಯತ್ ರಕ್ಷಣಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಅಗ್ನಿಜ್ವಾಲೆಯಂತಿದ್ದ ದಲಿತ ಮತ್ತು ವಿದ್ಯಾರ್ಥಿ ಶಕ್ತಿಯ ಸದ್ದಡಗಿಸಲು ಕೇಂದ್ರ ಸರಕಾರವು ಸಮಾನ ಸಿವಿಲ್ ಕೋಡ್ ವಿಷಯಕ್ಕೆ ಕೈ ಹಾಕಿದೆ.
ವಿವಿಧತೆಯಲ್ಲಿ ಏಕತೆ ಇರುವ ದೇಶದಲ್ಲಿ ಸಮಾನ ಸಿವಿಲ್ ಬಿಡಿ, ಸಾಮಾನ್ಯ ಸಿವಿಲ್ ಕೂಡ ಅಸಾಧ್ಯ ಎಂದು ದೇಶದ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ವಾಜಪೇಯಿ ಸರಕಾರವಿದ್ದಾಗಲೇ ತಿಳಿಸಿದ್ದಾರೆ. ಈ ದೇಶಕ್ಕೆ ಯಾವ ಕಾನೂನು ಬೇಕು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹವಾಗಲಿ.
ಸಮಾನ ಸಿವಿಲ್ ಕೋಡ್ ಬಗ್ಗೆ ಯಾವುದೇ ಕರಡು ಇಲ್ಲಿಯವರೆಗೆ ರಚನೆಯಾಗಿಲ್ಲ. ಅದನ್ನು ನಮ್ಮ ದೇಶದಲ್ಲಿ ತರಲು ಯತ್ನಿಸುತ್ತಿರುವುದು ಮೂರ್ಖತನ ಎಂದು ಮುಹಮ್ಮದ್ ಕುಂಞಿ ಹೇಳಿದರು.
ವರದಿ: ಮುಹಮ್ಮದ್ ಇರ್ಷಾದ್ ವೇಣೂರು