ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಕ್ಯಾ.ಗಣೇಶ್ ಕಾರ್ಣಿಕ್
ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದ ಸಮಾರೋಪ
ಪುತ್ತೂರು ,ಡಿ.5 : ಕಿಟಕಿಯಿಂದ ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ವಿಶೇಷ ಆಸಕ್ತಿಯಿಂದ ತನ್ನ ಸುತ್ತಲಿನ ಸಮಸ್ಯೆಗೆ ಸರಳವಾಗಿ ಪರಿಹಾರ ಹೇಳುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಅಂತಹ ವ್ಯಕ್ತಿಗಳಿಂದ ಸಮಾಜದಲ್ಲಿ ಶಾಂತಿ- ಸುಭಿಕ್ಷೆ ನೆಲೆಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯಲ್ಲಿ ಕಳೆದ ಮೂರು ದಿನ ನಡೆದ 24ನೇ ಅಖಿಲ ಕರ್ನಾಟಕ ರಾಜ್ಯ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದರು.
ವಿಜ್ಞಾನ ಎನ್ನುವುದು ಜೀವನದ ಒಂದು ಅಂಗ; ಪ್ರತ್ಯೇಕವಲ್ಲ. ಪ್ರಕೃತಿ ಜತೆಗೆ ಮನುಷ್ಯ ಜತೆಯಾಗಿ ಹೆಜ್ಜೆ ಹಾಕಿದ್ದೇ ಸಂಸ್ಕೃತಿ ಎಂದು ಕರೆಯಲ್ಪಟ್ಟಿತು. ವಿರುದ್ಧವಾಗಿ ಹೆಜ್ಜೆ ಹಾಕಿದ್ದು ವಿಕೃತಿ ಎಂದಾಯಿತು. ಪ್ರಾಕೃತಿಕ ಅಸಮತೋಲನ, ಹಿಮಶಿಖರಗಳ ಕರಗುವಿಕೆ, ಓಝೋನ್ ಪದರದ ರಂಧ್ರ, ಬರ ಇವೆಲ್ಲಾ ವಿಕೃತಿಯ ಪರಿಣಾಮ. ಸಂಬಂಧಗಳನ್ನು ಅರ್ಥ ಮಾಡಿಕೊಂಡು ಹಾಳು ಮಾಡಿಕೊಳ್ಳದೇ ಪ್ರಕೃತಿಯ ಅತೀತ ಶಕ್ತಿಯ ಜತೆಗೆ ಬದುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ವಿಜ್ಞಾನ ಎನ್ನುವುದು ಇದಮಿತ್ಥಂ ಅಲ್ಲ. ವಿಷಯದ ಆಳಕ್ಕೆ ಇಳಿಯಬೇಕು. ವಿಶೇಷ ಆಸಕ್ತಿ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಹೊರಗಿನಿಂದ ಬಂದ ಎಲ್ಲವನ್ನು ಯಥಾಪ್ರಕಾರವಾಗಿ ಸ್ವೀಕರಿಸುವುದು ಸರಿಯಲ್ಲ. ಹಾಕಿಕೊಳ್ಳಲು ಬಟ್ಟೆ ಇಲ್ಲದಾಗಲೇ ಅಪಾರ ಪಾಂಡಿತ್ಯ, ಜ್ಞಾನ ಭಾರತದಲ್ಲಿತ್ತು. ಹಂಪಿ, ಶೃಂಗೇರಿ ಮೊದಲಾದ ಕ್ಷೇತ್ರಗಳ ಕೆತ್ತನೆಗಳೇ ಇದಕ್ಕೆ ಸಾಕ್ಷಿ.
ಆದರೆ ಬುದ್ಧಿಜೀವಿ ಎನಿಸಿಕೊಂಡವರು ಕಿಟಕಿಯಿಂದ ಜಗತ್ತನ್ನು ನೋಡಿಕೊಂಡು, ಸಂಸ್ಕೃತಿಗೆ ಮೌಢ್ಯದ ಬಣ್ಣ ಲೇಪಿಸಲು ಹೊರಟಿದ್ದಾರೆ. ಒಳಮರ್ಮ ತಿಳಿದುಕೊಳ್ಳಬೇಕಾದರೆ ವಿಷಯದ ಆಳಕ್ಕೆ ಇಳಿಯಬೇಕು. ಕಿಟಕಿಯಿಂದ ಈಚೆಗೆ ಬಂದು ಜಗತ್ತನ್ನು ನೋಡಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಮಾತನಾಡಿ, ವಿಜ್ಞಾನ ಸಮಾವೇಶದ ಪ್ರಬಂಧ ಮಂಡನೆ, ಪ್ರಾಜೆಕ್ಟ್ಗಳು ಇಂಗ್ಲೀಷ್ನಲ್ಲಿರುತ್ತವೆ. ಕನ್ನಡದಲ್ಲಿಯೂ ಪ್ರಸ್ತುತ ಪಡಿಸಲು ಅವಕಾಶ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಕಡಮಜಲು ಸುಭಾಸ್ ರೈ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ನಾಗೇಂದ್ರ ಮಧ್ಯಸ್ಥ, ಶಿವರಾಮಯ್ಯ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಭಾರ ನಿರ್ದೇಶಕ ಡಾ.ಎಂ. ಗಂಗಾಧರ ನಾಯಕ್, ಸುದಾನ ವಸತಿಯುತ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಬಿಇಓ ಶಶಿಧರ್ ಜಿ.ಎಸ್, ತಾಲೂಕು ಮುಖ್ಯಗುರುಗಳ ಸಂಘದ ಅಧ್ಯಕ್ಷ ಎಚ್.ಡಿ.ಶಿವರಾಮ, ಸುದಾನ ವಸತಿಯುತ ಶಾಲಾ ಮುಖ್ಯಗುರು ಶೋಭಾ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಕರುಣಾಕರ ಎಚ್.ಎಸ್. ವಂದಿಸಿದರು. ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.
ಸಭೆ ನಡುವೆ ವ್ಹೀಲ್ ಚೇರ್ನಲ್ಲಿ ಕುಳಿತಿದ್ದ ಅಂಗವಿಕಲ ವಿದ್ಯಾರ್ಥಿ ಪ್ರಶಾಂತ್ ಅವರನ್ನು ಗೌರವಿಸಲಾಯಿತು. ಅಂಗವಿಕಲ ವಿದ್ಯಾರ್ಥಿಯೋರ್ವ ವಿಜ್ಞಾನ ಪ್ರಬಂಧ ಮಂಡಿಸಿದ್ದು ಇದೇ ಮೊದಲ ಬಾರಿಗೆ ಎನ್ನುವುದು ವಿಶೇಷ. ಅತಿಥಿಗಳು ಆತನ ಬಳಿಗೆ ತೆರಳಿ ಸನ್ಮಾನಿಸಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆ
ನಾಲ್ಕು ವಿಭಾಗಗಳಲ್ಲಿ ಒಟ್ಟು 30 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಗರ ಹಿರಿಯ ವಿಭಾಗ, ನಗರ ಕಿರಿಯ ವಿಭಾಗ, ಗ್ರಾಮೀಣ ಹಿರಿಯ ವಿಭಾಗ, ಗ್ರಾಮೀಣ ಕಿರಿಯ ವಿಭಾಗ ಸ್ಪರ್ಧೆ ನಡೆದ ವಿಭಾಗ. ನಾಲ್ಕು ವಿದ್ಯಾರ್ಥಿಗಳು ಡಾ.ಸ.ಜ. ನಾಗಲೋಟಿಮಠ ದತ್ತಿ ಪ್ರಶಸ್ತಿಗೆ ಭಾಜನರಾದರು.
ಮೈಸೂರು ನಗರದ ವಿದ್ಯಾವರ್ಧಕ ಎಸ್.ಬಿ.ಎಂ. ಶಾಲೆಯ ಎಸ್.ವಿ. ಪವನ್, ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ್ವಸ್ತಿಕ್ಪದ್ಮ, ಉಜಿರೆ ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಸ್ನೇಹಾ ಮರಿಯಾ, ದಾವಣಗೆರೆಯ ಕುಕ್ಕರಗೊಲ್ಲ ಪಟೇಲ್ ವೀರಪ್ಪ ಶಾಲೆಯ ಆರ್.ಶ್ರೇಯ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದ ಬಾರಾಮತಿ ನಗರದಲ್ಲಿ ಡಿ. 27ರಿಂದ ಐದು ದಿನಗಳ ಕಾಲ ನಡೆಯುವ 24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಅಧಿವೇಶನದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ವೈಜ್ಞಾನಿಕಾ ಯೋಜನಾ ಪ್ರಬಂಧ ಮಂಡಿಸಲಿದ್ದಾರೆ.
ಪವನ್ ಬಾಲವಿಜ್ಞಾನಿ
ಮೂರು ದಿನಗಳ ಕಾಲ ನಡೆದ ವಿಜ್ಞಾನ ಮೇಳದಲ್ಲಿ ಎಸ್.ವಿ. ಪವನ್ ಅವರನ್ನು ಬಾಲವಿಜ್ಞಾನಿ ಎಂದು ಘೋಷಿಸಲಾಯಿತು.
ಸಮಾರೋಪದ ಕೊನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಬಾಲವಿಜ್ಞಾನಿ 2016 ಪ್ರಶಸ್ತಿ ನೀಡಲಾಯಿತು. ಇವರು ನಮಗೆ ಅವಶ್ಯವಾದ ಕಳೆ ವಿಷಯದಲ್ಲಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ್ದರು. ಇವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕಿ ಅನುಪಮ ಪದಕಿ ಅವರಿಗೆ ಉತ್ತಮ ಮಾರ್ಗದರ್ಶಿ ಪ್ರಶಸ್ತಿ ಲಭಿಸಿತು.
ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ರಾಜ್ಯದ ಒಟ್ಟು 837 ವಿದ್ಯಾರ್ಥಿಗಳು, 192 ಮಾರ್ಗದರ್ಶಕ ಶಿಕ್ಷಕರು, 36 ಜಿಲ್ಲಾ ಸಂಯೋಜಕರು, 20 ತೀರ್ಪುಗಾರರು, 275 ಸ್ವಯಂಸೇವಕರು ಭಾಗವಹಿಸಿದ್ದರು.