ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ಐಸಿಎಆರ್ ಮಹಾನಿರ್ದೇಶಕರ ಭೇಟಿ, ಪರಿಶೀಲನೆ
ಪುತ್ತೂರು, ಡಿ.11 : ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದಲಿರುವ ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ನ ಮಹಾ ನಿರ್ದೇಶಕ ಹಾಗೂ ಕೇಂದ್ರ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ತ್ರಿಲೋಚನ್ ಮಹೋಪಾತ್ರ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಶೋಧನಾ ಸಲಹೆ ಸೂಚನೆ ನೀಡಿದರು.
ತಂತ್ರಜ್ಞಾನ ತಲುಪಿಸುವಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಹಯೋಗ ಅಗತ್ಯ ಎಂದ ಅವರು, ಈ ನಿಟ್ಟಿನಲ್ಲಿ ಗೇರು ಸಂಶೋಧನಾ ಕೇಂದ್ರ ಕೊಯ್ಲೋತ್ತರ ಸಂಸ್ಕರಣೆ ಮತ್ತು ನರ್ಸರಿ ತಂತ್ರಜ್ಞಾನವನ್ನು ಲೈಸನ್ಸ್ ಮಾಡುವುದರ ಮೂಲಕ ಯುವ ಶಕ್ತಿಯನ್ನು ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಇಂಗಿತದಂತೆ ‘ನಗದುರಹಿತ ವ್ಯವಹಾರ’ವನ್ನು ಸಂಸ್ಥೆಯ ಎಲ್ಲಾ ಹಣಕಾಸು ವ್ಯವಹಾರದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ನ ತೋಟಗಾರಿಕಾ ವಿಭಾಗದ ಸಹಾಯಕ ನಿದೇರ್ಶಕ ಡಾ. ಜಾನಕಿರಾಮ್, ವಿಜ್ಞಾನಿಗಳಾದ ಡಾ. ರವಿಪ್ರಸಾದ್ ಮತ್ತು ಡಾ. ಮೋಹನ್ ಉಪಸ್ಥಿತರಿದ್ದರು.
ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಭಾರ ನಿರ್ದೇಶಕ ಡಾ ಎಂ.ಜಿ. ನಾಯಕ್ ಸ್ವಾಗತಿಸಿದರು.
ಕೋಯ್ಲೋತ್ತರ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಬಾಲಸುಬ್ರಮಣಿ ಎನ್ ವಂದಿಸಿದರು.