ಪುತ್ತೂರಿನಲ್ಲಿ ‘ಪುತ್ತೂರು ಕಲಾವಿದೆರ್’ ನಾಟಕ ತಂಡ ಅಸ್ಥಿತ್ವಕ್ಕೆ
ಇಂದು ‘ಪಂಡ್ದ್ ಸುಖ ಇಜ್ಜಿ’ ನಾಟಕದ ಪ್ರಥಮ ಪ್ರಯೋಗ
ಪುತ್ತೂರು, ಡಿ.13 : ಪುತ್ತೂರಿನಲ್ಲಿ ನೂತನವಾಗಿ ‘ಪುತ್ತೂರು ಕಲಾವಿದೆರ್’ ನಾಟಕ ತಂಡ ಅಸ್ಥಿತ್ವಕ್ಕೆ ಬಂದಿದ್ದು, ಈ ತಂಡದ ಪ್ರಥಮ ಪ್ರಯೋಗವಾಗಿ ನೀತಿ ಬೋಧಕ ತುಳು ಹಾಸ್ಯಮಯ ನಾಟಕ ‘ಪಂಡ್ದ್ ಸುಖ ಇಜ್ಜಿ’ ಬುಧವಾರ ಸಂಜೆ ಪುತ್ತೂರಿನ ಪುರಭವನದಲ್ಲಿ ಪ್ರದರ್ಶನಗೊಳ್ಳುವುದು. ನಾಟಕಾಭಿಮಾನಿಗಳೆಲ್ಲರಿಗೂ ಉಚಿತ ಪ್ರವೇಶವಿದೆ ಎಂದು ತಂಡದ ಯಜಮಾನ ಬೂಡಿಯಾರ್ ರಾಧಾಕೃಷ್ಣ ರೈ ಅವರು ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿಭಾವಂತ ಕಲಾವಿದರಿಗೆ ಅವಕಾಶ ಒದಗಿಸುವ ಮೂಲಕ ಆಸರೆಯಾಗುವ ಜೊತೆಗೆ ಒಂದಿಷ್ಟು ಸಮಾಜ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಈ ನಾಟಕ ತಂಡ ರಚಿಸಲಾಗಿದೆ. ಪುತ್ತೂರು ಕಲಾವಿದೆರ್ ತಂಡದಲ್ಲಿ ತಾಲ್ಲೂಕಿನ 20 ಮಂದಿ ಕಲಾವಿದರಿದ್ದಾರೆ. ಪುತ್ತೂರಿನ ಅಜೇಯನಗರದವರಾಗಿದ್ದು, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಗಣರಾಜ ಚಂದ್ರ , ವಿಜಯಹರಿ ರೈ, ಪೂರ್ಣಿಮಾ ನಾಳ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವರು. ನಾರಾಯಣ ಪಾಟಾಳಿ ಬಲ್ನಾಡು ಅವರು ಸಮಗ್ರ ನಿರ್ವಹಣೆ ಮಾಡುವರು. ತುಳು ರಂಗಭೂಮಿ ಮತ್ತು ಸಿನೇಮಾ ಕಲಾವಿದ ಪ್ರಕಾಶ್ ಕೆ ತೂಮಿನಾಡು ಅವರು ‘ಪಂಡ್ದ್ ಸುಖ ಇಜ್ಜಿ’ ನಾಟಕವನ್ನು ರಚಿಸಿ,ಕಥೆ,ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಪ್ರದರ್ಶನ ಆರಂಭಗೊಳ್ಳುವ ಮೊದಲೇ 7 ಪ್ರದರ್ಶನಗಳು ಬುಕ್ಕಿಂಗ್ ಆಗಿದ್ದು, ಎಲ್ಲೆಡೆಯಿಂದ ಪ್ರೋತ್ಸಾಹ ಸಿಗುವ ನಿರೀಕ್ಷೆಯಿದೆ.ಪ್ರದರ್ಶನದ ಕಲಾವಿದರಿಗೆ ಸಂಭಾವಣೆ ನೀಡಿ ವರ್ಷಾಂತ್ಯಕ್ಕೆ ಉಳಿಕೆಯಾಗುವ ಹಣದಲ್ಲಿ ಆಸಕ್ತ ಕಲಾವಿದರಿಗೆ, ದುರ್ಬಲ ವರ್ಗದವರಿಗೆ ಹಾಗೂ ಬಡವರಿಗೆ ನೆರವು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಾಟಕದ ಪ್ರಥಮ ಪ್ರದರ್ಶನವನ್ನು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಉದ್ಘಾಟಿಸಲಿದ್ದಾರೆ.
ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ,ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಉದ್ಯಮಿ ಅಶೋಕ್ ರೈ ಕೋಡಿಂಬಾಡಿ, ಪುತ್ತೂರಿನ ವೈದ್ಯ ಡಾ.ಸುರೇಶ್ ಪುತ್ತೂರಾಯ, ಉದ್ಯಮಿ ಪುರಂದರ ರೈ ಮಿತ್ರಂಪಾಡಿ ಮತ್ತು ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ತಂಡದ ವತಿಯಿಂದ ನಾಟಕದ ನಿರ್ದೇಶಕ ಪ್ರಕಾಶ್ . ಕೆ ತೂಮಿನಾಡು ಅವರನ್ನು ಗೌರವಿಸುವರು. ಬಲ್ನಾಡುಸಿ.ಎ.ಬ್ಯಾಂಕಿನ ಅಧ್ಯಕ್ಷ ಎ.ಎಂ.ಪ್ರಕಾಶ್ಚಂದ್ರ ಆಳ್ವ ಮುಂಡೇಲು, ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ, ಉದ್ಯಮಿ ಅರುಣ್ಕುಮಾರ್ ರೈ ಆನಾಜೆ, ಮುಕ್ಕೂರು ಪೆರುವಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದಯಾಕರ ಆಳ್ವ ಕುಂಬ್ರ, ಕಾವು ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಬಪ್ಪನಾಡು ಯಕ್ಷಗಾನ ಮೇಳದ ಸಂಚಾಲಕ ಸತ್ಯಪಾಲ ರೈ ಕಡೆಂಜ, ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರಿನ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು, ನಾಟಕ ಕಲಾವಿದರಾದ ವಿಜಯಹರಿ ರೈ, ಗಣರಾಜ ಚಂದ್ರ, ನಾರಾಯಣ ಪಾಟಾಳಿ ಬಲ್ನಾಡು ಉಪಸ್ಥಿತರಿದ್ದರು