ಕರಾವಳಿ ಉತ್ಸವದ ಅಂಗವಾಗಿ ಈಜುಸ್ಪರ್ಧೆ ಉದ್ಘಾಟನೆ
ಮಂಗಳೂರು, ಜ.1: ದ.ಕ. ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಉತ್ಸವ ಅಂಗವಾಗಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕರ-ಬಾಲಕಿಯರ ಹಾಗೂ ಮುಕ್ತ ಈಜು ಸ್ಪರ್ಧೆಯು ರವಿವಾರ ಪಾಲಿಕೆಯ ಈಜುಕೊಳದಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ಈಜುಪಟು ವೈಷ್ಣವ್ ಬೆಲೂನು ಹಾರಿಸುವ ಮೂಲಕ ಈಜು ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹೆತ್ತವರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿಬೇಕು.ಅವರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಮಾಡುವ ಬಗ್ಗೆ ಸರಕಾರದ ಗಮನ ಸೆಳೆದಿದ್ದೇನೆ. ಈಗಾಗಲೇ 12.50 ಕೋ.ರೂ. ವೆಚ್ಚದಲ್ಲಿ ಎಮ್ಮೆಕೆರೆಯಲ್ಲಿ ಈಜುಕೊಳ ನಿರ್ಮಾಣ ಮಾಡಲಾಗುತ್ತಿದೆ. ಓಲಿಂಪಿಕ್ಸ್ ಈಜು ಸ್ಪರ್ಧೆಯಲ್ಲಿ ಯಾವುದೇ ಚಿನ್ನದ ಪದಕವನ್ನು ಪಡೆಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಮಂಗಳೂರಿನ ಈಜು ಸ್ಪರ್ಧಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವಂತಾಗಲಿ ಎಂದು ಹೇಳಿದರು.
ಕಾರ್ಪೊರೇಟರ್ ಜಯಂತಿ ಆಚಾರ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ನಗರ ಪಾಲಿಕೆಯ ಈಜುಕೊಳದ ಮ್ಯಾನೇಜರ್ ರಮೇಶ್, ವಾಲಿಬಾಲ್ ತರಬೇತುದಾರ ನಾರಾಯಣ್ ಉಪಸ್ಥಿತರಿದ್ದರು.