ಮುಲ್ಕಿ : ಫೇಮಸ್ ಯೂತ್ ಕ್ಲಬ್ನ ವಾರ್ಷಿಕೋತ್ಸವ
ಮುಲ್ಕಿ, ಜ.2: ಫೇಮಸ್ ಯೂತ್ ಕ್ಲಬ್ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ ಸಮಾಜಮುಖಿ ಕೆಲಸಗಳಲ್ಲಿಯೂ ಮುಂಚೂಣಿಯಲ್ಲಿರುವುದು ಅಭಿನಂದನೀಯ ಎಂದು ಅದಾನಿ ಪೌಂಡೇಶನ್ನ ಕಾರ್ಯನಿರ್ವಾಹಕ ಕಿಶೋರ್ ಆಳ್ವ ಹೇಳಿದರು.
ಅವರು ಹಳೆಯಂಗಡಿ ಸಮೀಪದ ಫೇಮಸ್ ಯೂತ್ ಕ್ಲಬ್ನ 29ನೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಧಕರಿಗೆ ಸನ್ಮಾನ ಮತ್ತಿತರರ ಸಮಾಜಮುಖಿ ಕೆಲಸಗಳ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸ್ಥಳೀಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸುಬ್ರಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಯಶೋದಾ ಶೆಟ್ಟಿಗಾರ್, ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವಿನೋದ್ ಕುಮಾರ್ ಸಸಿಹಿತ್ಲು, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ಮಂಗಳೂರು ನಗರಾಭಿವೃದ್ಧಿ ಸದಸ್ಯ ವಸಂತ ಬೆರ್ನಾರ್ಡ್, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ ಅವರನ್ನೂ ಇದೆ ವೇಳೆ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಕೆ.ಪಿ.ಸಿ.ಸಿ ಸದಸ್ಯ ಗುರುರಾಜ ಎಸ್. ಪೂಜಾರಿ ತಮ್ಮ ವೈಯಕ್ತಿಕ ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ನವೀನ್ ಕುಂದರ್ ರವರಿಗೆ ಧನ ಸಹಾಯ ನೀಡಿದರು.
ಈ ಸಂದರ್ಭ ಮಂಗಳೂರು ಎಸ್.ಕೆ.ಪಿ.ಎ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್, ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ವಿಶ್ವಜಿತ್ , ಕೋಶಾಧಿಕಾರಿ ನವೀನ್ ಚಂದ್ರ ಮತ್ತಿತರರು ವೇದಿಕೆಯಲ್ಲಿದ್ದರು.
ಸಂಘದ ಸದಸ್ಯರಾದ ಮುಹಮ್ಮದ್ ಶರೀಫ್ ವರದಿ ವಾಚಿಸಿದರು.
ಲಕ್ಷಣ್ ಸ್ವಾಗತಿಸಿದರು.
ಭಾಸ್ಕರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.