ಜನವರಿ 7ರಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು, ಜ. 3: ಗುರುಪುರ - ಕುಕ್ಕುದಕಟ್ಟೆ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಜನವರಿ 7ರಂದು ನಡೆಯಲಿರುವ ‘ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ಜಯಲಕ್ಷ್ಮ್ಮಿ ಬಿ. ಶೆಟ್ಟಿ ತಿಳಿಸಿದ್ದಾರೆ.
‘ಪುಸ್ತಕ ಪ್ರದರ್ಶನ’ವನ್ನು ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹೀಂ, ‘ವಸ್ತು ಪ್ರದರ್ಶನ’ದ ಉದ್ಘಾಟನೆಯನ್ನು ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಸಚಿನ್ ಕುಮಾರ್ ನೆರವೇರಿಸಲಿದ್ದಾರೆ.
ಚಂದ್ರಕಲಾ ನಂದಾವರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಸಮ್ಮೇಳನ ಜರಗಲಿದ್ದು, ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹಾಗೂ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ್ ಭಟ್ ಸನ್ಮಾನಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಧಕರಿಗೆ ಸನ್ಮಾನ
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿಯನ್ನು ಸನ್ಮಾನಿಸಲಾಗುವುದು. ಜಿ.ಟಿ. ಅಣ್ಣುಭಟ್ (ಕಲಾವಿದರು, ವಿದ್ವಾಂಸರು), ಹೊಸಬೆಟ್ಟು ಗುರುರಾಜ್ ಆಚಾರ್ (ಸಮಾಜಸೇವೆ, ಧಾರ್ಮಿಕ), ಪ್ರೊ. ಡಿ. ವೇದಾವತಿ (ಸಾಹಿತ್ಯ ಶಿಕ್ಷಣ), ಕುಳವೂರು ನಾರಾಯಣ ಪೂಜಾರಿ (ಸಮಾಜಸೇವೆ), ಯಾದವ ಸಾಲ್ಯಾನ್ (ಜಾನಪದ), ಉಸ್ಮಾನ್ ಕಲ್ಲಾಪು (ಸಮಾಜಸೇವೆ), ಸುಬ್ಬಲಕ್ಷ್ಮೀ (ಮಹಿಳಾ ಸ್ವ-ಉದ್ಯೋಗ), ಸದಾನಂದ ಹೆಗಡೆಕಟ್ಟೆ (ಸಾಹಿತ್ಯ ಪತ್ರಿಕೋದ್ಯಮ), ಗುರುವಪ್ಪ ಪೂಜಾರಿ ಕೆದುಬರಿ (ಕಂಬಳ), ರಫೀಕ್ ಗುರುಪುರ (ಸಮಾಜಸೇವೆ), ಸ್ಟೀಫನ್ ಕ್ವಾಡ್ರಸ್ (ಸಾಹಿತ್ಯ ಸಂಶೋಧನೆ) ಇವರನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್ ಮತ್ತು ದ.ಕ. ಜಿಲ್ಲಾ ಪಂಚಾಯತ್ನ ಉಪಾಧ್ಯಕ್ಷೆ ಕಸ್ತೂರಿ ಪಂಜ ಸನ್ಮಾನಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದು, ಯಕ್ಷಗಾನ ಅರ್ಥದಾರಿ, ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ನ ಮಂಗಳೂರು ತಾಲೂಕು ಘಟಕಾಧ್ಯಕ್ಷೆ ಜಯಲಕ್ಷ್ಮಿಬಿ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.