ಮಂಗಳೂರು ವಿವಿ ಅಂತರ್ ಕಾಲೇಜು ಪವರ್ಲಿಫ್ಟಿಂಗ್ಗೆ ಚಾಲನೆ
ಉಡುಪಿ, ಜ.17: ನಮ್ಮಲ್ಲಿ ವಿದ್ಯಾವಂತರಿಗೇನೂ ಕೊರತೆ ಇಲ್ಲ. ಆದರೆ ನಿರುದ್ಯೋಗಿ ವಿದ್ಯಾವಂತರನ್ನು ವೃತ್ತಿ ಕೌಶಲ್ಯ ಪರಿಣತರನ್ನಾಗಿಸಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಉದ್ಯೋಗಾಧಾರಿತ ಉಚಿತ ಕೌಶಲ್ಯ ತರಬೇತಿಯನ್ನು ಉಡುಪಿಯಲ್ಲಿ ಆಯೋಜಿಸಲಾಗಿದೆ. ಯುವಜನರ ಸಬಲೀಕರಣಕ್ಕೆ ಸರಕಾರ ಬದ್ಧವಾಗಿದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ನಗರದ ಪುರಭವನದಲ್ಲಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಮಂಗಳೂರು ವಿವಿ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳೆಯರ ಪವರ್ಲಿಫ್ಟಿಂಗ್ ಚಾಂಪಿಯನ್ ಶಿಪ್ ಮತ್ತು ರಕ್ತದಾನ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಯಶ್ಪಾಲ್ ಸುವರ್ಣ, ದಿನೇಶ್ ಕುಂದರ್, ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಮೆಂಡನ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ರೆಡ್ಕ್ರಾಸ್ ಕಾರ್ಯದರ್ಶಿ ಜನಾರ್ದನ್, ಮಂಗಳೂರು ವಿವಿಯ ಹರಿದಾಸ್ ಕೂಳೂರು, ಸತೀಶ್ ಕುಮಾರ್ ಕುದ್ರೋಳಿ, ಕಾಲೇಜಿನ ಪ್ರಾಂಶುಪಾಲ್ ಪ್ರೊ.ಜಗದೀಶ್ ರಾವ್, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ.ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.