ಹಿರಿಯಡ್ಕ ಪೇಟೆ ಅಭಿವೃದ್ಧಿಗೆ ನೀಲನಕಾಶೆ: ವಿನಯಕುಮಾರ್ ಸೊರಕೆ
ಉಡುಪಿ, ಜ.23: ಹಿರಿಯಡ್ಕ ಪೇಟೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿ ನಲ್ಲಿ ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಸಾರ್ವಜನಿಕ ಶೌಚಾಲಯದ ನೀಲನಕಾಶೆಯನ್ನು ತಯಾರಿಸಲಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿ ಲೋಕೋಪಯೋಗಿ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ಸುಮಾರು 2.60ಕೋ.ರೂ. ವೆಚ್ಚದಲ್ಲಿ ಹಿರಿಯಡ್ಕ- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಒಂದೂವರೆ ಕಿ.ಮೀ. ಉದ್ದದ ಚತ್ಪುಷಥ ಕಾಮಗಾರಿಗೆ ಸೋಮವಾರ ಹಿರಿಯಡ್ಕದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ಹಿರಿಯಡ್ಕ- ಕಾರ್ಕಳ ರಸ್ತೆಯನ್ನು ಸುಮಾರು 10ಕೋಟಿ ರೂ. ಅನುದಾನ ದಲ್ಲಿ ಅಗಲೀಕರಣ ಮಾಡಲಾಗುವುದು. ಕಾಪು ಕ್ಷೇತ್ರಕ್ಕೆ ಈ ವಾರ್ಷಿಕ ವರ್ಷದಲ್ಲಿ ಕೇಂದ್ರ ರಸ್ತೆ ನಿಧಿಯಿಂದ 49ಕೋಟಿ ರೂ. ಅನುದಾನ ಮಂಜೂ ರಾಗಿದ್ದು, ನಾಲ್ಕೈದು ಸೇತುವೆಗಳ ನಿರ್ಮಾಣಕ್ಕಾಗಿ ಎರಡನೆ ಹಂತದ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂರು.
ಹಿರಿಯಡ್ಕ ಸುತ್ತಮುತ್ತಲಿನ ಮೂರು ಗ್ರಾಪಂಗಳ ವ್ಯಾಪ್ತಿಯಲ್ಲಿ 6.45 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಳೆದ ಒಂದು ವಾರದಲ್ಲಿ ಒಟ್ಟು 28 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಕೆರೆ, ಕಿಂಡಿ ಅಣೆಕಟ್ಟು, ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕಾರ್, ತಾಪಂ ಸದಸ್ಯ ಲಕ್ಷ್ಮಿನಾರಾಯಣ ಪ್ರಭು, ಅಂಜಾರು ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ರಾಜಾರಾಂ ಹೆಗ್ಡೆ, ವಿನೋದ್, ಸಂಧ್ಯಾ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ಚಂದ್ರ ಶೇಖರ್, ಸುಧೀರ್ ಹೆಗ್ಡೆ, ಇಲಾಖಾ ಇಂಜಿನಿಯರ್ ಚಂದ್ರಶೇಖರ್ ಉಪಸ್ಥಿತರಿದ್ದರು. ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಮಾಲತಿ ಆಚಾರ್ಯ ಸ್ವಾಗತಿಸಿದರು. ಜಯವಂತ್ ಪೈ ಕಾರ್ಯಕ್ರಮ ನಿರೂಪಿಸಿದರು.