ಇಲಾಖೆಗಳಿಂದ ನಿಗದಿತ ಗುರಿ ಸಾಧನೆ: ಕೆಡಿಪಿ ಸಭೆಗೆ ಮಾಹಿತಿ
ಉಡುಪಿ, ಫೆ.2: ಜಿಪಂ ವ್ಯಾಪ್ತಿಯಡಿ ಬರುವ ವಿವಿಧ ಇಲಾಖೆಗಳು ನಿಗದಿತ ಗುರಿ ಸಾಧಿಸಿವೆ ಎಂದು ಬುಧವಾರ ಮಣಿಪಾಲದ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕೆಡಿಪಿ ಮಾಸಿಕ ಸಭೆಗೆ ಮಾಹಿತಿ ನೀಡಲಾಯಿತು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ವೇಳೆ ವಿವಿಧ ಇಲಾಖೆಗಳು ನಿಗದಿತ ಗುರಿ ಸಾಧನೆ ಮಾಡಿರುವುದು ಕಂಡುಬಂತು. ಪಾಲನಾ ವರದಿ ಪರಿಶೀಲನೆ ವೇಳೆ, ಶಿಕ್ಷಣ ಇಲಾಖೆ ಕಟ್ಟಡ ನಿರ್ಮಾಣ ಹಾಗೂ ಶಿಥಿಲಾ ವಸ್ಥೆಯಲ್ಲಿರುವ ಕಟ್ಟಡಗಳ ಪುನರ್ ನಿರ್ಮಾಣ ಮಾಡುವಾಗ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ ದೂರಿದರು.
ಶಿಕ್ಷಣ ಇಲಾಖೆಯಡಿ ಬರುವ ಶಿಥಿಲಾ ವಸ್ಥೆಯಲ್ಲಿರುವ ಕಟ್ಟಡಗಳ ಸಮಸ್ಯೆಗಳ ಕುರಿತಂತೆ ಉದಯ ಕೋಟ್ಯಾನ್ ಸಭೆಯ ಗಮನ ಸೆಳೆದರು. ಬಿಇಒಗಳಿಂದ ಸಮಗ್ರ ಮಾಹಿತಿ ತರಿಸಿ ಇಲಾಖೆ ಈ ಸಂಬಂಧ ಕ್ರಮಕೈಗೊಳ್ಳುವುದಾಗಿ ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ನಾಗರಾಜ್ ಉತ್ತರಿಸಿದರು.
ಇಲಾಖಾ ಕಟ್ಟಡಗಳ ಆರ್ಟಿಸಿ ಮಾಡುವ ಕುರಿತು ನಡೆದ ಪ್ರಗತಿ ಪರಿಶೀಲನೆ ವೇಳೆ, ಈ ಬಗ್ಗೆ ಕಂದಾಯ ಇಲಾಖೆ ಸಭೆಯಲ್ಲಿ ಚರ್ಚಿಸುವಂತೆ ಯೋಜನಾಧಿಕಾರಿ ಹೇಳಿದರಲ್ಲದೆ ಕಾಮಗಾರಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಾಯಿ ಸಮಿತಿ ಸಭೆ ಯಲ್ಲೂ ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಿ ದರು. ಶಿಶು ಸ್ನೇಹಿ ಅಂಗನವಾಡಿ ಬಗ್ಗೆಯೂ ಸೂಕ್ತ ಮಾರ್ಗದರ್ಶನ ನೀಡಿದರು. ಗ್ರಾಮ ಲೆಕ್ಕಿಗರಿಗೆ ಒಬ್ಬೊಬ್ಬರಿಗೆ ಮೂರು ಗ್ರಾಪಂ ಗಳನ್ನು ನೀಡಿದ್ದು ಗ್ರಾಮದ ಜನರಿಗೆ ಕೆಲಸಕ್ಕೆ ಕಷ್ಟವಾಗುತ್ತಿದೆ. ಗ್ರಾಮಲೆಕ್ಕಿಗರು ಜನರಿಗೆ ಲಭ್ಯ ವಾಗುವ ಬಗ್ಗೆ ಮಾಹಿತಿ ನೀಡಲು ಬಾಬು ಶೆಟ್ಟಿ ಹೇಳಿದರು. ಅಲ್ಲದೇ ಜಿಲ್ಲಾ ಹಿಂದುಳಿದ ಅಭಿವೃದ್ಧಿ ನಿಗಮದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗದಿರುವ ಬಗ್ಗೆಯೂ ಅವರು ಸಭೆಯ ಗಮನಸೆಳೆದರು. ಈ ಬಗ್ಗೆ ಬ್ಯಾಂಕರ್ಗಳ ಸಭೆಯಲ್ಲಿ ಚರ್ಚಿಸುವ ಬಗ್ಗೆ ಯೋಜನಾಧಿಕಾರಿಗಳು ತಿಳಿಸಿದರು. ತಾಲೂಕುಗಳಲ್ಲಿ ನೀರಿನ ಅಭಾವವನ್ನು ಎದು ರಿಸುವ ಬಗ್ಗೆ ಕಾರ್ಕಳದಲ್ಲಿ ಜಲಮೂಲವನ್ನು ಕಂಡು ಹಿಡಿಯುವಂತೆ ಜಿಯಾಲಜಿಸ್ಟ್ಗಳಿಗೆ ಸೂಚನೆ ನೀಡಲಾಗಿದೆ. ಇಒಗಳು ಇದರ ಹೊಣೆಯನ್ನು ವಹಿಸಿಕೊಳ್ಳಬೇಕು ಎಂದು ಯೋಜನಾಧಿಕಾರಿ ಸೂಚಿಸಿದರು. ಬಾಬು ಶೆಟ್ಟಿ ಅಕ್ರಮ ಮರಳುಗಾರಿಕೆ ಬಗ್ಗೆ ಗಮನ ಸೆಳೆದರಲ್ಲದೆ, ಚೆಕ್ ಪೋಸ್ಟ್ನ್ನು ಬಲ ಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಮರಳು ಜಿಲ್ಲೆಯಿಂದ ಹೊರಗೆ ಹೋಗದಂತೆ ಕ್ರಮಕೈಗೊಳ್ಳಿ, ಜಿಲ್ಲೆಗೆ ಅನ್ಯಾಯವಾಗುತ್ತಿದೆ ಎಂದರು.
ಶಾಲೆಬಿಟ್ಟ ಮಕ್ಕಳ ಮರುಸೇರ್ಪಡೆಗೆ ತಕ್ಷಣವೇ ಕ್ರಮ ಕೈಗೊಳ್ಳಿ, ಆರೋಗ್ಯ ಇಲಾಖೆ ನಿಗದಿತ ಗುರಿ ಸಾಧಿಸಿದೆ. ಕೃಷಿ ಇಲಾಖೆಯಲ್ಲಿ ರಸಗೊಬ್ಬರ ವಿತ ರಣೆ ಶೇ.80ರಷ್ಟು ಸಾಧನೆಯಾಗಿದ್ದು, ಗೊಬ್ಬರ ಕೊರತೆ ಇಲ್ಲ. ಎಣ್ಣೆಕಾಳು ಉತ್ಪಾದನೆಯಲ್ಲಿ ಕೊರತೆ ದಾಖಲಿಸಿದ್ದು, ಮಳೆ ಇಲ್ಲದಿರುವುದರಿಂದ ಕೊರತೆ ಯಾಗಿದೆ. ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಸಾಧನೆ ಮಾಡಿ ಇದನ್ನು ಎಂಜಿಎನ್ಆರ್ಜಿ ಮುಖಾಂತರ ಮಾಡಿ ಎಂದು ಯೋಜನಾಧಿಕಾರಿಗಳು ಸೂಚನೆ ನೀಡಿದರು.
ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಅಂಗನ ವಾಡಿಗಳ ನಿವೇಶನ ಸಂಬಂಧ ಅಧಿಕಾರಿಗಳ ್ರತ್ಯೇಕ ಸಮಿತಿ ರಚಿಸಿ ಸಮನ್ವಯ ಸಮಿತಿ ಸಭೆ ಪ್ರತೀ ಶುಕ್ರವಾರ ಅಪರಾಹ್ನ ನಡೆಸಲು ಸೂಚನೆ ನೀಡಿದರು. ಇದೇ ರೀತಿ ವಿವಿಧ ನಿಗಮಗಳ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಮೆಸ್ಕಾಂ ಸಂಪರ್ಕ ಕುರಿತ ಸಮಗ್ರ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ ಉಪಸ್ಥಿತ ರಿದ್ದರು. ಮುಖ್ಯ ಯೋಜನಾಧಿಕಾರಿ ಶಿ್ರೀನಿವಾಸ್ ರಾವ್ ಸ್ವಾಗತಿಸಿದರು. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಸಭೆಯಲ್ಲಿ ಉಪಸ್ಥಿತರಿದ್ದರು.