ಕೊಂಕಣಿಗರ ಒಗ್ಗಟ್ಟು ಶ್ಲಾಘನೀಯ: ಮೇಯರ್ ಹರಿನಾಥ್
ಮಂಗಳೂರು, ೆ.10: ಭಾರತ ಹಲವು ಧರ್ಮ, ಜಾತಿಗಳನ್ನು ಒಳಗೊಂಡ ದೇಶ. ಕೊಂಕಣಿಗರ ಒಗ್ಗಟ್ಟು ಶ್ಲಾಘನಾರ್ಹವಾಗಿದೆ ಎಂದು ಮನಪಾ ಮೇಯರ್ ಕೆ. ಹರಿನಾಥ್ ಅಭಿಪ್ರಾಯಿಸಿದರು.
ಶುಕ್ರವಾರ ನಗರದ ಪುರಭವನದಲ್ಲಿ ಕೊಂಕಣಿ ಲೋಕೋತ್ಸವ್-2017ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೊಂಕಣಿ ಸಮಾಜವು ಏಕತೆಯನ್ನು ಸಾಸಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಕೊಂಕಣಿ ಗೌಡ, ಸಾರಸ್ವತದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜ್ಯ ಮತ್ತು ದೇಶದ ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ದೇಶಕ್ಕಾಗಿ ದುಡಿಯುವಾಗ ಜಾತಿ ಮತಗಳ ಭೇದ ಬೇಡ. ಕೊಂಕಣಿಗರು ಯಾವುದೇ ಗಿಡವನ್ನು ಬೆಳೆಸಿದರೂ ಅದು ಬೆಳೆದು ಬಲಾಢ್ಯವಾಗಲಿದೆ. ಕೊಂಕಣಿಗರಲ್ಲಿ 41 ಸಮುದಾಯಗಳಿವೆ. ಏಕತೆಯಿಂದ ದೇಶದ ಏಳಿಗೆಗೆ ಶ್ರಮಿಸೋಣ ಎಂದರು.
ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಮಾತನಾಡಿ, ಕೊಂಕಣಿಗರು ಆತ್ಮ ವಿಶ್ವಾಸದಲ್ಲಿ ಬಲಾಢ್ಯರು. ಶೇ.99ರಷ್ಟು ಕೊಂಕಣಿಗರ ಮಾತು ಮಧುರ. ಅವರ ಆತ್ಮೀಯತೆಯ ಮಾತುಗಳು ಎಂತಹ ಕಟು ಮನಸ್ಸುಳ್ಳವರನ್ನೂ ಕರಗಿಸಿಬಿಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಾ. ಡೆನ್ನಿಸ್ ಮೊರಸ್ ಪ್ರಭು ಮಾತನಾಡಿದರು.
ಗ್ಲಾಡಿಸ್ ಕ್ವಾಡ್ರಸ್ ಪೆರ್ಮುದೆ ಬರೆದ ‘ಭಾರಾತಾಚ್ಯಾ ಸುಟ್ಕೆ ಝುಜಾಂತ್ ಸೀಯೊ’ ಹಾಗೂ ಕ್ಯಾಥರಿನ್ ರೊಡ್ರಿಗಸ್ ಬರೆದ ‘ಆಜ್ ತಾಕಾ ಾಲ್ಯಾಂ ತುಕಾ’ ನೀಳ್ಗತೆಗಳ ಪುಸ್ತಕಗಳನ್ನು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಹಾಗೂ ಕಸಾಪ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರು ಬಿಡುಗಡೆಗೊಳಿಸಿದರು.
ವಿಶ್ವ ಕೊಂಕಣಿ ಸಂಸ್ಥೆಯ ಮುಖಂಡ ಬಸ್ತಿ ವಾಮನ ಶೆಣೈ, ಕೊಂಕಣಿ ಅಕಾಡಮಿ ಸಮಿತಿಯ ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈ, ಎರಿಕ್ ಓಝರಿಯೋ, ಲುಲ್ಲಿಸ್ ಕುಟಿನ್ಹಾ, ಕಮಲಾಕ್ಷ ಶೇಟ್, ಶೇಖರ ಗೌಡ ಬಜ್ಪೆ, ಜಯರಾಮ್ ಸಿದ್ದಿ, ಶಿವಾನಂದ ಶೇಟ್, ಮಮತಾ ಕಾಮತ್, ಚೇತನ್ ನಾಯಕ್, ಡಾ.ವಾರಿಜಾ ನಿರ್ಬೈಲ್ ಬಂಟ್ವಾಳ, ಲಾರೆನ್ಸ್ ಡಿಸೋಜ ಉಪಸ್ಥಿತರಿದ್ದರು.
ಕೊಂಕಣಿ ಅಕಾಡಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಸ್ವಾಗತಿಸಿದರು. ಎಂ.ಆರ್.ಕಾಮತ್ ಹಾಗೂ ಐರಿನ್ ರೆಬೆಲ್ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ಬಾಳಿಗಾ ವಂದಿಸಿದರು.
ಕೊಂಕಣಿಗರ ವಿವಿಧ ಕಲಾ ತಂಡಗಳಿಂದ ಜನಪದ ನೃತ್ಯ ಪ್ರದರ್ಶನ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.