ಶಿವಾಜಿ ಇಲ್ಲದ ಭಾರತದ ಇತಿಹಾಸ ಅಪೂರ್ಣ: ಅನುರಾಧ
ಉಡುಪಿ, ಫೆ.19: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ತಿಳಿಯದೆ ಅಭ್ಯಸಿಸುವ ಭಾರತ ದೇಶದ ಇತಿಹಾಸ ಅಪೂರ್ಣ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರವಿವಾರ ನಿಟ್ಟೂರಿನ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮರಾಠ ಸಂಸ್ಥಾನದ ಸ್ಥಾಪಕನಾಗಿರುವ ಶಿವಾಜಿ, ತನ್ನ ತಾರುಣ್ಯದಲ್ಲಿಯೇ ಸಮರ ಕಲೆಗಳಲ್ಲಿ ನಿಪುಣ, ಧೀಮಂತ ಯೋಧನಾಗಿದ್ದರು. ಅಪ್ಪಟ ಸ್ವಾಭಿಮಾನಿ ಹಾಗೂ ದೇಶಪ್ರೇಮಿಯಾಗಿದ್ದ ಶಿವಾಜಿ ಮಹಾರಾಜ, ಉತ್ತಮ ಆಡಳಿತಗಾರ. ಆತನ ಆಡಳಿತ ಕ್ರಮಗಳೂ ಇಂದಿಗೂ ಮಾದರಿಯಾಗಿವೆ ಎಂದು ಅವರು ತಿಳಿಸಿದರು.
ಕಾರ್ಕಳದ ಉಪನ್ಯಾಸಕ ಆದರ್ಶ ಗೋಖಲೆ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿ, ಶಿವಾಜಿಯ ಆಡಳಿತ ಚಿಂತನೆ ಹಾಗೂ ಯುದ್ಧ ಕಲೆಗಳನ್ನು ಜಗತ್ತಿನ ಜನ ಗುರುತಿಸಿ ಸ್ವೀಕರಿಸಿದ್ದಾರೆ. ಶಿವಾಜಿಯ ಗೆರಿಲ್ಲಾ ಯುದ್ದತಂತ್ರವೇ ವಿಯೆಟ್ನಾಂ ಸ್ವಾತಂತ್ರ್ಯಕ್ಕೆ ಪ್ರೇರಣೆಯಾಗಿದೆ. ಶಿವಾಜಿ ಆಡಳಿತದ ಮಾದರಿಯಲ್ಲಿ ಇಂದಿನ ಆಡಳಿತ ವ್ಯವಸ್ಥೆ ಸಾಗಬೇಕಿದೆ ಎಂದರು.
ಶಿವಾಜಿ ಆದರ್ಶ ಇಂದಿನ ಯುವಜನತೆ, ತಾಯಂದಿರಿಗಿಂತ ಆಡಳಿತ ನಡೆಸುತ್ತಿರುವ ನಾಯಕರಿಗೆ ಬೇಕಾಗಿದೆ. ಭಾರತದ ಸ್ವಾತ್ರಂತ್ರ್ಯ ಹೋರಾಟದಲ್ಲಿ ಹಲವು ಕ್ರಾಂತಿಕಾರಿಗಳಿಗೆ ಶಿವಾಜಿ ಸಾಧನೆಗಳೇ ಆದರ್ಶಗಳಾಗಿದ್ದವು. ಭಾರತೀಯರ ಮನೆ ಮನಗಳಲ್ಲಿ ಶಿವಾಜಿ ಎಲ್ಲರಿಗೂ ಸದಾ ಪ್ರೇರಣೆಯಾಗಲಿ ಎಂದು ಹೇಳಿದರು.
ಉಡುಪಿ ತಹಶಿಲ್ದಾರ್ ಮಹೇಶ್ಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಬಾಲ ಮಂದಿರದ ಅಧೀಕ್ಷಕಿ ಹುಲಿಗೆವ್ವ ಜೋಗೆರ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನಿಲ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ನ ಅಧ್ಯಕ್ಷ ಕೇಶವ ರಾವ್, ಮರಾಠ ಸ್ವಾಭಿಮಾನಿ ಜಾಗೃತಿ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ನ್ಯಾಕ್ ಮೋರೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕಿ ಪೂರ್ಣಿಮ ಸ್ವಾಗತಿಸಿದರು. ಗಣೇಶ್ ಕುಮಾರ್ ಗಂಗೊಳ್ಳಿ ಕಾರ್ಯಕ್ರಮನಿರೂಪಿಸಿದರು. ಬಳಿಕ ಶಿವಾಜಿ ಮಹಾರಾಜರ ಕುರಿತು ಯಕ್ಷಗಾನ ಪ್ರದರ್ಶನ ನಡೆಯಿತು.