ಕೋಟೇಶ್ವರ, ತೆಕ್ಕಟ್ಟೆಯಲ್ಲಿ ಮನೆ ನಿವೇಶನ ರಹಿತರ ಸಮಾವೇಶ
ಕುಂದಾಪುರ, ಫೆ.22: ರಾಜ್ಯದಲ್ಲಿ 1 ಕೋಟಿಗೂ ಮಿಕ್ಕಿ ಕೃಷಿ ಕೂಲಿಕಾರರಿದ್ದು, ಸ್ವಂತ ನಿವೇಶನ ಹೊಂದಿಲ್ಲದವರೇ ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಕ್ಕುಗಳ ಬಗ್ಗೆ ಜಾಗೃತಿ, ತಿಳುವಳಿಕೆ ಮೂಡದ ಹೊರತು ಬೇಡಿಕೆ ಈಡೇರುವುದಿಲ್ಲ ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು.ದಾಸ ಭಂಡಾರಿ ಹೇಳಿದ್ದಾರೆ.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಯ ವತಿಯಿಂದ ಇಂದು ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಮನೆ ನಿವೇಶನ ರಹಿತ ಅರ್ಜಿದಾರರ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಂಘದ ತೆಕ್ಕಟ್ಟೆ ಗ್ರಾಮ ಸಮಿತಿ ಕಾರ್ಯದರ್ಶಿ ಸತೀಶ ಕುಮಾರ ತೆಕ್ಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ವೆಂಕಟೇಶ ಕೋಣಿ, ತಾಲೂಕು ಉಪಾಧ್ಯಕ್ಷ ರಾಜೀವ ಪಡುಕೋಣೆ, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಮೊಯ್ದಿನಬ್ಬ, ಶೀಲಾವತಿ ಉಪಸ್ಥಿತರಿದ್ದರು.
ಕೋಟೇಶ್ವರ: ಕೋಟೇಶ್ವರ ರಥಬೀದಿಯ ಶಾರದ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಕೋಟೇಶ್ವರ ಗಾಪಂ ವ್ಯಾಪ್ತಿಯ ಮನೆ ನಿವೇಶನ ರಹಿತ ಅರ್ಜಿದಾರರ ಸಮಾವೇಶ ಜರಗಿತು.
ಸಂಘದ ಕೋಟೇಶ್ವರ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಕರಿಯ ದೇವಾಡಿಗ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಯು. ದಾಸ ಭಂಡಾರಿ, ಮುಖಂಡರಾದ ರಾಜೀವ ಪಡುಕೋಣೆ, ಪದ್ಮಾವತಿ ಶೆಟ್ಟಿ, ಕುಶಲ, ರತ್ನ ಮೊದಲಾದವರು ಉಪಸ್ಥಿತರಿದ್ದರು.