ವಿಜಯ-ವಿಕ್ರಮ ಕಂಬಳದ ಕರೆ ಮುಹೂರ್ತ
ಉಪ್ಪಿನಂಗಡಿ, ಫೆ.24: ಇಲ್ಲಿನ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯ ವಿಜಯ-ವಿಕ್ರಮ ಕಂಬಳ ಕರೆಯಲ್ಲಿ ಶುಕ್ರವಾರ ವಿಜಯ-ವಿಕ್ರಮ ಕಂಬಳದ ಕರೆ ಮುಹೂರ್ತ ನಡೆಯಿತು. ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಕರೆ ಮುಹೂರ್ತದ ಬಳಿಕ ಶ್ರಮದಾನ ನಡೆಸಿದ ಕಂಬಳಾಭಿಮಾನಿಗಳು ಕರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಂಬಳದ ಪರ ಕಾನೂನು ಹೋರಾಟಗಾರ, ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಪ್ರಾಣಿ ಹಿಂಸೆ ತಡೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ್ದು, ರಾಷ್ಟ್ರಪತಿಯವರು ಅಂಗೀಕಾರ ನೀಡಬೇಕಿದೆ. ಆದ್ದರಿಂದ ತಾನು ಸೇರಿದಂತೆ ಕಂಬಳ ಸಮಿತಿಯ ನಿಯೋಗವೊಂದು ಫೆ.28ರಂದು ದಿಲ್ಲಿಗೆ ತೆರಳಲಿದ್ದು, ಸಂಸದರನ್ನು ಭೇಟಿಯಾಗಿ ಶೀಘ್ರ ಈ ಮಸೂದೆಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದೇವೆ. ಅಲ್ಲದೇ ಮಾ.18ರ ಮೊದಲು ಈ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರಿಂದ ಅಂಗೀಕಾರ ದೊರೆತರೆ, ಮಾ.18ರಂದು ಉಪ್ಪಿನಂಗಡಿಯ ವಿಜಯ-ವಿಕ್ರಮ ಕಂಬಳ ನಡೆಯಲಿದೆ, ಇಲ್ಲದಿದ್ದರೆ ಇಲ್ಲ ಎಂದರು. ಈ ಸಂದರ್ಭ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ನಂದಾವರ, ಕೋಶಾಧಿಕಾರಿ ಸೀತಾರಾಮ್ ಶೆಟ್ಟಿ ಹೆಗ್ಡೆಹಿತ್ಲು, ಪ್ರ.ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ವಿಠಲ ಶೆಟ್ಟಿ ಕುಲ್ಲೊಟ್ಟು, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಮತ್ತಿತರರು ಉಪಸ್ಥಿತರಿದ್ದರು.