ಹರತಾಳಕ್ಕೆ ನೀರಸ ಪ್ರತಿಕ್ರಿಯೆ
ಸಹಜ ಸ್ಥಿತಿಯತ್ತ ಮಂಗಳೂರು
ಮಂಗಳೂರು, ಫೆ.25: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಯನ್ನು ವಿರೋಧಿಸಿ ಸಂಘ ಪರಿವಾರ ಕರೆ ನೀಡಿರುವ ಹರತಾಳಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಳ್ಳಾಲ, ತೊಕ್ಕೊಟ್ಟು, ಕೋಟೆಕಾರ್, ತಲಪಾಡಿ, ದೇರಳಕಟ್ಟೆ, ಕೊಣಾಜೆ, ಪಜೀರ್ ಮತ್ತಿತರ ಕೆಲವು ಕಡೆ ಹರತಾಳ ಬೆಂಬಲಿಗರು ಮುಂಜಾನೆ ಹೊತ್ತು ಟಯರ್ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಿರ್ಮಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಗ್ರಾಮಾಂತರ ಪ್ರದೇಶದ ಹಲವು ಕಡೆ ಬಸ್ ಸಂಚಾರ ಓಡಾಟ ನಡೆಸಲಿಲ್ಲ. ಆದರೆ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳು ಎಂದಿನಂತೆ ಓಡಾಡುತ್ತಿವೆ. ಈ ಮಧ್ಯೆ 8 ಗಂಟೆಯ ಬಳಿಕ ಕೆಲವು ಖಾಸಗಿ ಬಸ್ಗಳೂ ಓಡಾಟ ಆರಂಭಿಸಿವೆ.
ಈ ನಡುವೆ ಕೆಲವು ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದ್ದರೆ, ಇನ್ನು ಕೆಲವು ಶಾಲಾ-ಕಾಲೇಜುಗಳು ಎಂದಿನಂತೆ ತೆರೆದಿದೆ. ಇಂದು ಪ್ರಥಮ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಬಾಡಿಗೆ ವಾಹನಗಳ ಆಶ್ರಯ ಪಡೆಯುತ್ತಿದ್ದುದು ಮತ್ತು ಪ್ರಯಾಣಿಕರು ಅಲ್ಲಲ್ಲಿ ಭಾರೀ ಸಂಖ್ಯೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದುದು ಕಂಡು ಬಂತು.
ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಸೂಕ್ತ ಬಂದೋ ಬಸ್ತ್ ಏರ್ಪಡಿಸಲಾಗಿದೆ.