ಉಡುಪಿ: ಹೇರೂರು ದುರ್ಗಾಂಬಿಕಾ ದೇವಳದಲ್ಲಿ ಕಳ್ಳತನ
ಉಡುಪಿ, ಮಾ.29: ಬೈಂದೂರಿನ ಕೆಳ ಹೇರೂರು ದುರ್ಗಾಂಬಿಕಾ ದೇವಳದಲ್ಲಿ ಕಳ್ಳತನವಾಗಿರುವ ಘಟನೆ ವರದಿಯಾಗಿದೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನದ ಅರ್ಚಕ ದೇವಸ್ಥಾನಕ್ಕೆ ಬೀಗ ಜಡಿದು ಮನೆಗೆ ತೆರಳಿದ್ದರು. ಬುಧವಾರ ಬೆಳಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕ ಹಾಗೂ ಮುಖ್ಯಸ್ಥ ರಾಮಯ್ಯ ಬಳೆಗಾರರಿಗೆ ದೇವಸ್ಥಾನದಲ್ಲಿ ಕಳವಾಗಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನದ ಮುಂಭಾಗದ ಬಾಗಿಲಿನ ಬೀಗಮುರಿದು ಒಳನುಗ್ಗಿದ ಕಳ್ಳರು ಸುಮಾರು 3.25ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವುಗೈದಿದ್ದಾರೆ. ಬೆಳ್ಳಿ ಪ್ರಭಾವಳಿ, ಬೆಳ್ಳಿ ಮುಖವಾಡ, ಸೊಂಟ ಪಟ್ಟಿ, ಒಂದು ಜೊತೆ ತಂಬಿಗೆ, ಕಾಲು ಬಳೆ, ಎಲೆಹಾರ, ಚಿನ್ನದ ಲಕ್ಷ್ಮೀ ಹಾರ, 22 ಚಿನ್ನದ ತಾಳ , 12 ಚಿನ್ನದ ಕರಿಮಣಿ ಕಳವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story