ಪೊಲೀಸ್ ದೌರ್ಜನ್ಯ: ಕೆ.ಎಸ್.ಅಮೀರ್ ತುಂಬೆ ಖಂಡನೆ
ಬಂಟ್ವಾಳ, ಎ.8: ಕಾಟಿಪಳ್ಳ ಕೈಕಂಬ ನಿವಾಸಿ ಅಹ್ಮದ್ ಖುರೇಷಿಯವರನ್ನು ವಿಚಾರಣೆಯ ಹೆಸರಿನಲ್ಲಿ ಒಂದು ವಾರ ಅಕ್ರಮವಾಗಿ ಕೂಡಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಹಾಗೂ ನ್ಯಾಯಕ್ಕಾಗಿ ಕಮಿಷನರ್ ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಲಾಠಿ ಬೀಸಿರುವ ಪೊಲೀಸರ ಕ್ರಮವನ್ನು ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಡಾ. ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಖಂಡಿಸಿದ್ದಾರೆ.
ಕರಾವಳಿ ಪೊಲೀಸರಿಂದ ಅಲ್ಪಸಂಖ್ಯಾತ ಸಮುದಾಯದ ಯುವಕರು ಪದೇ ಪದೇ ಚಿತ್ರಹಿಂಸೆಗೊಳಗಾಗುತ್ತಿದ್ದಾರೆ. ಇದರಿಂದ ಪೊಲೀಸ್ ಇಲಾಖೆಯ ಮೇಲೆ ಅಲ್ಪಸಂಖ್ಯಾತರು ಭರವಸೆ ಕಳೆದುಕೊಳ್ಳುವಂತಾಗಿದೆ. ಅಹ್ಮದ್ ಖುರೇಷಿಯ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ, ನ್ಯಾಯ ಕೇಳಲು ಹೋದವರ ಮೇಲೆ ನಿರ್ದಾಕ್ಷಿಣ್ಯವಾಗಿ ಲಾಠಿ ಚಾರ್ಜ್ ಮಾಡಿರುವ ಪೊಲೀಸರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಬಿ.ರಮಾನಾಥ ರೈ, ಯು.ಟಿ.ಖಾದರ್ ಅವರಲ್ಲಿ ಚರ್ಚಿಸಲಾಗಿದೆ. ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಅಹ್ಮದ್ ಖುರೇಷಿಗೆ ಪರಿಹಾರ ನೀಡುವ ಬಗ್ಗೆ ಸಕರಾತ್ಮಕ ಭರವಸೆ ನೀಡಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.