ತುಟ್ಟಿಭತ್ತೆ ಮಜೂರಿಗೆ ಸೇರಿಸಿ ನೀಡುವಂತೆ ಒತ್ತಾಯಿಸಿ ಬೀಡಿ ಕಾರ್ಮಿಕರ ಧರಣಿ
ಮಂಗಳೂರು, ಎ.18: ಕಾನೂನು ಪ್ರಕಾರ ನೀಡಬೇಕಾದ ತುಟ್ಟಿಭತ್ತೆ 12.75 ರೂ.ವನ್ನು ಮಜೂರಿಗೆ ಸೇರಿಸಿಕೊಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನೂರಾರು ಬೀಡಿ ಕಾರ್ಮಿಕರು ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಿದರು.
ಅದಕ್ಕೂ ಮೊದಲು ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ಕಾರ್ಮಿಕ ಆಯುಕ್ತರ ಕಚೇರಿಗೆ ರ್ಯಾಲಿ ನಡೆಸಲಾಯಿತು.
2015ರ ಎ.1ರಿಂದ ತುಟ್ಟಿಭತ್ತೆ ಏರಿಕೆಯಾಗಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರ ಈ ವಿಷಯದಲ್ಲಿ ನಾಟಕವಾಡುತ್ತಿದೆ. ನಾನಾ ಕಾರಣಗಳಿಂದ ಶೋಷಣೆಗೊಳಗಾದ ಬೀಡಿ ಕಾರ್ಮಿಕರು ಇದೀಗ ಸರಕಾರದಿಂದಲೂ ವಂಚನೆಯಾಗುತ್ತಿದೆ ಎಂದು ಬೀಡಿ ಕಾರ್ಮಿಕರು ಆರೋಪಿಸಿದರು.
ಧರಣಿಯಲ್ಲಿ ಸಿಐಟಿಯು ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ಯು.ಬಿ.ಲೋಕಯ್ಯ, ರಮಣಿ ಮೂಡುಬಿದಿರೆ, ಪದ್ಮಾವತಿ ಶೆಟ್ಟಿ, ಜಯಂತಿ ಬಿ. ಶೆಟ್ಟಿ, ಜಯಂತ ನಾಕ್, ಸದಾಶಿವ ದಾಸ್, ಭಾರತಿ ಬೋಳಾರ್, ಬಾಬು ದೇವಾಡಿಗ, ಜಯರಾಮ ಮಯ್ಯ, ಗಂಗಯ್ಯ ಅಮೀನ್, ಇಬ್ರಾಹೀಂ ಮದಕ ಮತ್ತಿತರರು ಪಾಲ್ಗೊಂಡಿದ್ದರು.
Next Story