ಮಕ್ಕಳಲ್ಲಿ ಸಾಹಿತ್ಯ ಓದುವ ಹವ್ಯಾಸ ಬೆಳೆಸಬೇಕು: ಭಾಸ್ಕರ ಕೋಡಿಂಬಾಳ
ಪುತ್ತೂರು ತಾಲೂಕು ಜಾನಪದ ಸಾಹಿತ್ಯ ವೇದಿಕೆಯಿಂದ ಸಾಧಕರಿಗೆ ಸನ್ಮಾನ
ಪುತ್ತೂರು, ಎ.25: ಇಂದಿನ ದಿನಗಳಲ್ಲಿ ನಮ್ಮಲ್ಲಿ ಸಾಹಿತ್ಯದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ನಮ್ಮ ಮಕ್ಕಳಿಗೆ ಒಳ್ಳೆಯ ಸಾಹಿತ್ಯದ ಪುಸ್ತಕಗಳನ್ನು ಕೊಡುವ ಮೂಲಕ ಅವರಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಪ್ರತಿಯೊಂದು ಮನೆಯಲ್ಲೂ ಪುಟ್ಟದಾದ ಗ್ರಂಥಾಲಯ ಇರಬೇಕು ಎಂದು ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಹೇಳಿದರು.
ಜಾನಪದ ಸಾಹಿತ್ಯ ವೇದಿಕೆ ಪುತ್ತೂರು ತಾಲೂಕು ಇದರ ವತಿಯಿಂದ ಇಲ್ಲಿನ ರೋಟರಿ ಟ್ರಸ್ಟ್ ಹಾಲ್ನಲ್ಲಿ ನಡೆದ ಸನ್ಮಾನ ಸಂಭ್ರಮ, ಸಾಧಕರಿಗೆ ಸನ್ಮಾನ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಜಾನಪದ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಹಿರಿಯ ರಂಗನಟ ಚಿದಾನಂದ ಕಾಮತ್ ಕಾಸರಗೋಡು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭೆಗಳನ್ನು ಇಲ್ಲಿ ಗೌರವಿಸಿದ್ದೇವೆ. ಇದು ಸನ್ಮಾನವಲ್ಲ. ಅವರ ಮುಂದಿನ ಸಾಧನೆಗೆ ನಾವು ನೀಡುವ ಚಿಕ್ಕ ಪ್ರೋತ್ಸಾಹ ಎಂದರು.
ಕಾರ್ಯಕ್ರಮದಲ್ಲಿ ಸಾಧಕರಾದ ಸುನೀಲ್ ಕಾವು, ಗುರುಪ್ರಿಯಾ ನಾಯಕ್ ಮತ್ತು ಫಾರೂಕ್ ಮುಕ್ವೆ ಅವರನ್ನು ಸನ್ಮಾನಿಸಲಾಯಿತು. ಸಂತೋಷ್ ಕುಮಾರ್ ಶಾಂತಿನಗರ, ಆದಿತ್ಯ ಈಶ್ವರಮಂಗಲ, ಯೂಸುಫ್ ರೆಂಜಲಾಡಿ, ರಾಕೇಶ್, ಸಂತೋಷ್ ಮೊರಾಸ್ ಅವರನ್ನು ಅಭಿನಂದಿಸಲಾಯಿತು
ಒಳಮೊಗ್ರು ಗ್ರಾಪಂ ಸದಸ್ಯೆ ಉಷಾ ನಾರಾಯಣ್ ಕುಂಬ್ರ, ಸಾಹಿತ್ಯ ವೇದಿಕೆಯ ಮಾಜಿ ಅಧ್ಯಕ್ಷ, ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರ್ಬೈಲು ಮಾತನಾಡಿದರು.
ಜಾನಪದ ಸಾಹಿತ್ಯ ವೇದಿಕೆಯ ಸಂಚಾಲಕ, ಪತ್ರಕರ್ತ ಉಮಾಪ್ರಸಾದ್ ನಡುಬೈಲು ಸ್ವಾಗತಿಸಿದರು. ಜಾನಪದ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ, ಪತ್ರಕರ್ತ ಸಿಶೇ ಕಜೆಮಾರ್ ವಂದಿಸಿದರು.