ಕೌಟುಂಬಿಕ ವೈಷಮ್ಯದಿಂದ ಕಾರ್ತಿಕ್ ಕೊಲೆ: ಕಮಿಷನರ್
ಮಂಗಳೂರು, ಎ. 29: ಪಜೀರು ಸುದರ್ಶನ ನಗರದ ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ತಿಕ್ರಾಜ್ ಸಹೋದರಿ ಕಾವ್ಯಾಶ್ರೀ ಹಾಗೂ ಪಂಡಿತ್ ಹೌಸ್ ಸಂತೋಷ ನಗರ ನಿವಾಸಿ ಗೌತಮ್ ಹಾಗೂ ಆತನ ಸಹೋದರ ಗೌರವ್ ಎಂಬವರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಇದೊಂದು ತೀರಾ ಸಂಕೀರ್ಣ ಹಾಗೂ ಕುರುಡು (ಬ್ಲೈಂಡ್) ಪ್ರಕರಣವಾಗಿತ್ತು. ಪ್ರಕರಣವನ್ನು ಭೇದಿಸುವುದು ಸವಾಲಿನ ಕಾರ್ಯವಾಗಿದ್ದು, ಸಿಸಿಆರ್ಬಿ ಎಸಿಪಿ ವೆಲೆಂಟೈನ್ ಡಿಸೋಜ ನೇತೃತ್ವದ ವಿಶೇಷ ತಂಡವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಇಂಜಿನಿಯರಿಂಗ್ ಪದವೀಧರರಾಗಿದ್ದ ಕಾರ್ತಿಕ್ರಾಜ್ ಕೆನರಾ ಸ್ಪ್ರಿಂಗ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದರು. ಸಹೋದರಿ ಕಾವ್ಯಾಶ್ರೀ (25) ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೇ ಕ್ಲರ್ಕ್ ಆಗಿದ್ದ ಸಂತೋಷ್ ನಗರ ನಿವಾಸಿ ಗೌತಮ್ (26) ಎಂಬವನ ಪರಿಚಯವಾಗಿತ್ತು. ಕಾವ್ಯಾಶ್ರೀ ಅವರಿಗೆ ವಿವಾಹವಾಗಿದ್ದು, ಪತಿ ದುಬೈಯಲ್ಲಿ ಉದ್ಯೋಗಿಯಾಗಿದ್ದಾರೆ. ಕಾವ್ಯಶ್ರೀ ಮತ್ತು ಕಾರ್ತಿಕ್ರಾಜ್ ನಡುವೆ ಕೌಟುಂಬಿಕ ವೈಷಮ್ಯದ ಹಿನ್ನೆಲೆಯಲ್ಲಿ ಗೌತಮ್ ಜತೆ ಸೇರಿಕೊಂಡು ಕಾರ್ತಿಕ್ರಾಜ್ನ ಕೊಲೆ ನಡೆಸಲಾಗಿದೆ.
ಅಕ್ಟೋಬರ್ 22ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ್ ಮಹಲ್ ಎಂಬಲ್ಲಿ ಬೆಳಗ್ಗೆ 5:30ರ ವೇಳೆಗೆ ಕಾರ್ತಿಕ್ರಾಜ್ ಜಾಗಿಂಗ್ಗೆ ಹೋಗುತ್ತಿದ್ದ ಸಂದರ್ಭ ಆರೋಪಿಗಳು ಕಾರ್ತಿಕ್ರಾಜ್ರ ಮೇಲೆ ಕಬ್ಬಿಣದ ಸಲಾಕೆಯಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ರಾಜ್ರನ್ನು ಕೊಣಾಜೆ ಪೊಲೀಸರ ಸಹಾಯದಿಂದ ಸಾರ್ವಜನಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅ. 23ರಂದು ಮೃತಪಟ್ಟಿದ್ದರು.
ಗೌತಮ್ ಮನೆಯೊಂದನ್ನು ಕಟ್ಟುತ್ತಿದ್ದು, ಅದಕ್ಕೆ ಹಣದ ಅಗತ್ಯವಿದ್ದರಿಂದ ಹಣದ ಆಮಿಷದಲ್ಲಿ ಈ ಕೊಲೆ ನಡೆದಿದೆ. ತೊಕ್ಕೊಟ್ಟಿನಲ್ಲಿ ಬೆಳಗ್ಗೆ 5 ಗಂಟೆಯ ವೇಳೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತರು ವಿವರ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ವಿವಿಧ ದಿಕ್ಕಿನಲ್ಲಿ ತನಿಖೆಯ ಬಳಿಕವೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ತಂಡಕ್ಕೆ ಬಹುಮಾನ
ಇದೇ ಸಂದರ್ಭ ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಪೊಲೀಸ್ ಆಯುಕ್ತ ಚಂದ್ರಶೇಖರ್ರವರು 25,000 ರೂ.ಗಳ ಬಹುಮಾನವನ್ನು ಘೋಷಿಸಿದರು. ಆರೋಪಿಗಳ ಪತ್ತೆ ಕಾರ್ಯದಲ್ಲಿ ವೆಲೆಂಟೈನ್ ಡಿಸೋಜ, ದಕ್ಷಿಣ ಉಪ ವಿಭಾಗದ ಎಸಿಪಿ ಶ್ರುತಿ, ಕೊಣಾಜೆ ಪೊಲೀಸ್ ನಿರೀಕ್ಷಕ ಅಶೋಕ್, ಸಿಬ್ಬಂದಿಗಳಾದ ಸುನಿಲ್ ಕುಮಾರ್, ದಾಮೋದರ, ರಿಜಿ ಪಿ.ಎಂ., ಸುಧೀರ್ ಶೆಟ್ಟಿ, ಮನೋಜ್ ಕಮಾರ್, ಮುಹಮ್ಮದ್ ಇಕ್ಬಾಲ್ ಭಾಗವಹಿಸಿದ್ದರು ಎಂದು ಆಯುಕ್ತರು ತಿಳಿಸಿದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ಶಾಂತರಾಜು, ಡಾ. ಸಂಜೀವ ಪಾಟೀಲ್, ಎಸಿಪಿಗಳಾದ ಶ್ರುತಿ, ವೆಲೆಂಟೈನ್ ಡಿಸೋಜ ಉಪಸ್ಥಿತರಿದ್ದರು.
ಮಾಹಿತಿ ಇರುವಾಗ ಪೊಲೀಸರ ಜತೆ ಹಂಚಿಕೊಳ್ಳಿ
ಕಾರ್ತಿಕ್ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯವಾಗಿ ಸಾಕಷ್ಟು ಖಚಿತ ಮಾಹಿತಿ ಇದ್ದರೂ ಅದನ್ನು ಹೇಳಿಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಇದರಿಂದಾಗಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸಾಕಷ್ಟು ಸಾಕ್ಷ, ಪುರಾವೆಗಳನ್ನು ಕಲೆ ಹಾಕಲು ವಿಳಂಬವಾಯಿತು. ಇಂತಹ ಸಮಾಜಘಾತುಕ ಪ್ರಕರಣಗಳು ಯಾವ ಸಂದರ್ಭದಲ್ಲಿ ಯಾರಿಗಾದರೂ ಘಟಿಸಬಹುದು. ಹಾಗಾಗಿ ಮಾಹಿತಿ ಇದ್ದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲಿ ಕ್ಷಿಪ್ರವಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸುವ ಅಗತ್ಯವಿದೆ ಎಂದು ಆಯುಕ್ತ ಚಂದ್ರಶೇಖರ್ ಮನವಿ ಮಾಡಿಕೊಂಡರು.
ಸಹೋದರನ ಪ್ರಾಣಕ್ಕೆ ಎರವಾಯ್ತು ಸಹೋದರಿಯ ವೈಷಮ್ಯ!
ಕಾವ್ಯಾಶ್ರೀ ಮತ್ತು ದುಬೈನಲ್ಲಿ ಉದ್ಯೋಗಿಯಾಗಿರುವ ಆಕೆಯ ಪತಿಯ ನಡುವೆ ಸಂಬಂಧ ಸರಿಹೊಂದುತ್ತಿರಲಿಲ್ಲ. ಇವರಿಬ್ಬರ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಕಾವ್ಯಾಶ್ರೀ ತನ್ನ ಸಹೋದರ ಕಾರ್ತಿಕ್ರಾಜ್ ಬಳಿಯಲ್ಲಿ ಹೇಳಿ ತಾಯಿ ಮನೆಗೆ ಬಂದಿದ್ದಳೆನ್ನಲಾಗಿದೆ. ಆದರೂ ಕಾರ್ತಿಕ್ ತನ್ನ ಸಹೋದರಿಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಮತ್ತೆ ಅದೇ ಮನೆಯವರ ಕಿರುಕುಳದಿಂದ ಬೇಸತ್ತ ಕಾವ್ಯಾಶ್ರೀ ತಾಯಿ ಮನೆಗೆ ಬಂದಿದ್ದು, ಈ ಸಂದರ್ಭದಲ್ಲಿ ಕಾರ್ತಿಕ್ ಮನೆಗೆ ಬಾರದಂತೆ ಹೇಳಿದ್ದರೆನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಕಾರ್ತಿಕ್ರಾಜ್ ಮತ್ತು ಕಾವ್ಯಾಶ್ರೀ ನಡುವೆ ಜಗಳವಾಗುತ್ತಿತ್ತು. ಕೊನೆಗೂ ಕಾರ್ತಿಕ್ ತನ್ನ ಸಹೋದರಿಗೆ ಕುತ್ತಾರ್ನಲ್ಲಿ ಬಾಡಿಗೆ ಮನೆಯೊಂದು ಮಾಡಿ ಅಲ್ಲೇ ಇರುವಂತೆ ಹೇಳಿದ್ದರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಕೆಲಸಕ್ಕೆ ಹೋಗುತ್ತಿದ್ದ ಕಾವ್ಯಾಶ್ರೀಗೆ ಅಲ್ಲಿ ಗೌತಮ್ ಎಂಬಾತನ ಪರಿಚಯವಾಗಿದೆ. ಈ ಪರಿಚಯವು ಪ್ರೇಮಕ್ಕೆ ತಿರುಗಿದ್ದು, ಈ ವಿಚಾರ ಕಾರ್ತಿಕ್ಗೆ ತಿಳಿದಿತ್ತು. ಇದರಿಂದ ಸಹೋದರಿಯನ್ನು ಕಾರ್ತಿಕ್ ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಕಾರ್ತಿಕ್ ವರ್ತನೆಯಿಂದ ಬೇಸತ್ತ ಕಾವ್ಯಾ ಅಣ್ಣನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಗೌತಮ್ ಜತೆ ಸೇರಿ ಸಹೋದರ ವಿರುದ್ಧವೇ ಗೌತಮ್ ಮೂಲಕ ಸುಪಾರಿ ನೀಡಿದ್ದಳೆನ್ನಲಾಗಿದೆ.