ಪಡುಬಿದ್ರೆ ಪೇಟೆಯಲ್ಲಿ ಭೂಸ್ವಾಧೀನ: ಮೇ 6 ಅಂತಿಮ ಗಡುವು
ಪಡುಬಿದ್ರೆ, ಮೇ 5: ಸುರತ್ಕಲ್-ಕುಂದಾಪುರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಪಡುಬಿದ್ರೆಯ ಪೇಟೆ ಭಾಗದ ಕಟ್ಟಡ ಮಾಲಕರು ಮೇ 6ರೊಳಗೆ ತಮ್ಮ ಜಮೀನನ್ನು ಹಸ್ತಾಂತರಿಸಬೇಕು ಎಂದು ಅಂತಿಮ ತಿಳುವಳಿಕೆ ನೊಟೀಸನ್ನು ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ನೀಡಿದ್ದಾರೆ.
66ರ ಚತುಷ್ಪಥ ಕಾಮಗಾರಿ ಆರಂಭಗೊಂಡಾಗ ಪೇಟೆ ಭಾಗದಲ್ಲಿ 60 ಮೀಟರ್ನಷ್ಟು ಸರ್ವೇ ನಡೆಸಲಾಗಿತ್ತು. ಆದರೆ ಪೇಟೆಯಲ್ಲಿ ಕೆಲವೊಂದು ಕಟ್ಟಡ ಮಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪೇಟೆ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನಡೆಸಿದರೆ ಪಡುಬಿದ್ರೆ ಸಂಪೂರ್ಣ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಬೈಪಾಸ್ ನಿರ್ಮಿಸಬೇಕು ಎಂದು ಪಟ್ಟು ಹಿಡಿದರು. ಆ ಬಳಿಕ ಪೇಟೆ ಭಾಗವನ್ನು ಬಿಟ್ಟು ಹೆದ್ದಾರಿ ಪ್ರಾಧಿಕಾರ ಬೈಪಾಸ್ಗಾಗಿ ಸರ್ವೇ ನಡೆಸಿತ್ತು. ಬೈಪಾಸ್ ನಿರ್ಮಾಣವಾದರೆ 50ಕ್ಕೂ ಅಧಿಕ ಮನೆಗಳು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಬೈಪಾಸ್ ಕೈಬಿಡಬೇಕು ಎಂದು ಬೈಪಾಸ್ ವಿರೋಧಿಗಳು ಒತ್ತಾಯಿಸಿದ್ದರು.
ಆ ಬಳಿಕ ಬೈಪಾಸ್ ಕಾಮಗಾರಿ ಕೈಬಿಟ್ಟ ಜಿಲ್ಲಾಡಳಿತ ಪೇಟೆ ಭಾಗದಲ್ಲಿಯೇ ಹೆದ್ದಾರಿ ಕಾಮಗಾರಿಗೆ ಮುಂದಾಗಿತ್ತು. ಸರ್ವೇ ಕಾರ್ಯ ನಡೆದು ನೋಟಿಸ್ ನೀಡುವ ಕಾರ್ಯ ನಡೆದಿದ್ದರೂ ಈವರೆಗೂ ಯಾರೂ ಜಾಗ ಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ತಾಲೂಕು ದಂಡಾಧಿಕಾರಿ ಜಿಲ್ಲಾಧಿಕಾರಿ ಪತ್ರ ಸಂಖ್ಯೆ ನಮೂದಿಸಿ, ರಾ.ಹೆ. 66ರ (17) ವಿಸ್ತರಣೆ ಪ್ರಕ್ರಿಯೆಗಾಗಿ ಜಮೀನು ಸ್ವಾಧೀನತೆ ಹಸ್ತಾಂತರ/ಒಪ್ಪಿಸಲು ಹಕ್ಕುದಾರರರು ನಿರಾಕರಿಸಿರುವ ಕಾರಣ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಬಲವಂತವಾಗಿ ವಶಕ್ಕೆ ಪಡೆದು ಸಂಬಂಧಪಟ್ಟ ಇಲಾಖೆಯವರಿಗೆ ಹಸ್ತಾಂತರಿಸುವಂತೆ ಆದೇಶಿಸಿದ್ದಾರೆ.
ಹೀಗಾಗಿ ಮೇ 6ರ ಒಳಗೆ ಭೂಸ್ವಾಧೀನಗೊಂಡಿರುವ ಜಮೀನನ್ನು ಸಂಬಂಧಪಟ್ಟ ಇಲಾಖೆಯವರಿಗೆ ಬಿಟ್ಟುಕೊಡಲು ತಿಳಿಸಲಾಗಿದೆ. ತಪ್ಪಿದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಕಲಂ 3 ಈ (2)(ಬಿ) ಪ್ರಕಾರ ಬಲವಂತವಾಗಿ ಜಮೀನನ್ನು ವಶಕ್ಕೆ ಪಡೆಯಲಾಗುವುದು ಎಂದು ದಂಡಾಧಿಕಾರಿ ನೋಟಿಸ್ನಲ್ಲಿ ತಿಳಿಸಿದ್ದಾರೆ.
ನೋಟಿಸ್ ಸ್ವೀಕರಿಸಿರುವ ಕೆಲವು ಕಟ್ಟಡ ಮಾಲಕರು ಕಟ್ಟಡಗಳನ್ನು ಬಿಟ್ಟುಕೊಟ್ಟರೂ ಉಳಿದವರು ಇದುವರೆಗೂ ಕಟ್ಟಡವನ್ನು ಬಿಟ್ಟುಕೊಟ್ಟಿಲ್ಲ. ಆದರೆ ಮೇ 6ರೊಳಗೆ ಜಾಗ ಹಾಗೂ ಕಟ್ಟಡಗಳನ್ನು ಬಿಟ್ಟುಕೊಡದಿದ್ದಲ್ಲಿ ಜಿಲ್ಲಾಡಳಿತ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಮಧ್ಯೆ ಹಲವು ಬಾರಿ ಪೇಟೆಯ ಕಟ್ಟಡ ಮಾಲಕರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಒಂದು ತಿಂಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ಕಾಲಾವಕಾಶ ನೀಡಿರುವುದರಿಂದ ಇನ್ನು ಸಮಯ ನೀಡಲಾಗುವುದಿಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ ಎನ್ನಲಾಗಿದೆ.