ಪುತ್ತೂರು: ಫಿಲೋಮಿನಾದಲ್ಲಿ ಸಾಧನೆಗೈದ ಸಿಬ್ಬಂದಿಗೆ ಸನ್ಮಾನ
ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರ್ಯಾಂಕು ವಿಜೇತರು ಮತ್ತು ನೆಟ್-ಕೆಸ್ಲೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಉಪನ್ಯಾಸ ವೃಂದದವರನ್ನು ಗುರುತಿಸಿ, ಸನ್ಮಾನಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯೂ ಪಾಲುದಾರನಾಗಿರುತ್ತಾನೆ. ಶಿಸ್ತು, ಬದ್ದತೆ ಮತ್ತು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಪ್ರಾಚಾರ್ಯರಾದ ಪ್ರೊ. ಲಿಯೊ ನೊರೊನ್ಹ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಸಾಧನೆ ಸುಲಭ ಮತ್ತು ಭವಿಷ್ಯದಲ್ಲಿ ಸಾರ್ಥಕತೆಯನ್ನು ಹೊಂದಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಮಲಾಕ್ಷಿ ಕೆ, ಪ್ರಸಾದ್ ಎಚ್ ಎಮ್, ಮಹಿತಾ ಕುಮಾರಿ ಎಮ್, ಸುದೀಪ್ ವಾಸ್ ಮತ್ತು ಮಾರಿಯೆಟ್ ಶೆರ್ಲಿ ಡಿಸೋಜ ಇವರನ್ನು ಸನ್ಮಾನಿಸಲಾಯಿತು.