ಚಾರ್ಮಾಡಿಯಲ್ಲಿ ಪ್ರಪಾತಕ್ಕೆ ಉರುಳಿದ ಬಸ್: ಇಬ್ಬರು ಮೃತ್ಯು, ಹಲವರಿಗೆ ಗಾಯ
ಬೆಳ್ತಂಗಡಿ, ಮೇ 16: ಖಾಸಗಿ ಬಸ್ಸೊಂದು ಕಮರಿಗೆ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಇಂದು ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಿಪತ್ರಿಯ ರಮೇಶ ರೆಡ್ಡಿ ಕಾಲನಿಯ ನಿವಾಸಿಗಳಾದ ಹಾಜಿಬಾ(40) ಹಾಗೂ ಮೆಹಬುನ್ನಿ(47) ಎಂಬ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಗಾಯಗೊಂಡಿದ್ದು ಇವರಲ್ಲಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ಕಾಲನಿಯ ನಿವಾಸಿಗಳು ಆಂಧ್ರದಿಂದ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದರು. ಪೆನುಗೊಂಡದಿಂದ ಆರಂಭಿಸಿ ಹಲವು ಮಸೀದಿಗಳ ಹಾಗೂ ದರ್ಗಾಗಳ ದರ್ಶನ ಪಡೆದು ಚಿಕ್ಕಮಗಳೂರಿನ ಬಾಬಾಬುಡನಗಿರಿಗೆ ಹೋಗಿ ಹರಕೆ ಸಲ್ಲಿಸಿದ ಬಳಿಕ ಉಳ್ಳಾಲಕ್ಕೆ ತೆರಳುತ್ತಿದ್ದರು. ಚಾರ್ಮಾಡಿ ಘಾಟಿಯ ಮೂರನೇ ತಿರುವಿನ ಸಮೀಪ ಬಂದಾಗ ಬ್ರೇಕ್ ವೈಫಲ್ಯಕ್ಕೆ ಈಡಾಗಿದ್ದು, ರಸ್ತೆ ಬದಿಯ ಧರೆಗೆ ಗುದ್ದಿ ರಸ್ತೆಗೆ ಉರುಳಿ ಬಿದ್ದಿದೆ.
ಬಸ್ ಬಿದ್ದಿರುವ ಮಾಹಿತಿ ಪಡೆದು ಕೂಡಲೆ ಚಾರ್ಮಾಡಿ ಪ್ರದೇಶದಿಂದ ಜನರು ಅತ್ತ ಧಾವಿಸಿ ರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಪೋಲೀಸರು ಹಾಗೂ ಬೆಳ್ತಂಗಡಿ ಪೋಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಸ್ಥಳೀಯರ ಸಹಕಾರದೊಂದಿಗೆ ಬಸ್ಸಿನಲ್ಲಿ ಸಿಲುಕಿಕೊಂಡಿದ್ದವರನ್ನು ಹೊರತೆಗೆಯಲಾಯಿತು. ಮೆಹಬುನ್ನಿ ಬಸ್ಸಿನಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟರೆ ಹಾಜಿಬಾ ಆಸ್ಪತ್ರಗೆ ತಂದು ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಅಪಘಾತದ ಹಿನ್ನಲೆಯಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಬಸ್ ಅನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿ ಕೊಡಲಾಯಿತು.
ಗಾಯಾಳುಗಳಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ತ್ವರಿತವಾಗಿ ಅಗತ್ಯ ಚಿಕಿತ್ಸೆಗಳನ್ನು ನೀಡಲಾಯಿತು ಗಂಭೀರವಾಗಿ ಗಾಯಗೊಂಡಿದ್ದ ಬಾಬಿಷಾ(50), ಎನ್. ಖಾದರ್ ಬಾಷಾ(55), ಇರ್ಪಾನ್ ಫಾತಿಮಾ(5), ಬುಗ್ರಬೀ(60), ಹಾಜಿ(30), ಬಶಿರನ್ (30), ಶೇರ್ ಖಾನ್(50),ಇರಾನ್ ಪಾಷಾ(40), ಉಮ್ರಾನ್(40), ಜಿಬಾನ್ ಬಾಷಾ, ಅವರನ್ನು ಮಂಗಳೂರಿನ ಆಸ್ಪತ್ರಗೆ ಕಳುಹಿಸಲಾಯಿತು.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಶೇರ್ ಖಾನ್(50), ಸಾದಗ್ನಿ(38), ಎಸ್. ಸಮೀರ್(3), ರಿಹಾನ್ (6), ಮೆಹರಾನ್(5), ಸಾಜಿದಾ(28), ಗೌಸಿಯಾ(45), ಮಾಮ್ಚಾಂದ್(23) ದಾದ ಖಲಂದರ್(37), ಬಹುಪೂರ್ ಖಾನ್(27), ಬೀಬಿ(38), ಶಹಿನಾ(9), ಗುಲ್ಜಾರ್(25), ಮಸೂದ್ (2), ಮಬಾಷಾ(20), ಸಾಕ್ಷಾಬಿ(20), ಹಿಮಾಬಿ(30), ಸಮೀರ್(6), ಸಕೀಲಾ(23), ಶಿಕ್ಷಾವುಬಿ(27), ಷಾಬಸ್(17), ಜಾಫರ್(18), ಖಲಂಧರ್(55), ಮಾನಿವಿ(70), ಇರ್ಪಾನ್(5), ಹುಸೈನ್(16), ಶಬೀರ್(16), ಶಾಹಿದ್(11) ಗಾಯಗೊಡಿದ್ದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.