ನಿಟ್ಟೂರು: ವಲಸೆ ಕಾರ್ಮಿಕರ ಗುಡಿಸಲಿಗೆ ಬೆಂಕಿ
ಉಡುಪಿ, ಮೇ 22: ನಿಟ್ಟೂರು ಅಡ್ಕದಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ಉತ್ತರ ಕರ್ನಾಟರ ಜಿಲ್ಲೆಗಳ ವಲಸೆ ಕೂಲಿ ಕಾರ್ಮಿಕರು ವಾಸ್ತವ್ಯ ಹೂಡಿದ್ದ ಸುಮಾರು 15-20 ಗುಡಿಸಲುಗಳಿಗೆ ಇಂದು ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಎಲ್ಲರೂ ಕೆಲಸಕ್ಕೆಂದು ಹೊರಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದಿದ್ದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಕ್ಕದ ಪಾಳುಬಾವಿ ಯೊಂದರಲ್ಲಿ ಕಸ ಹಾಕಲಾಗುತ್ತಿತ್ತು. ಸೋಮವಾರ ಅದಕ್ಕೆ ಬೆಂಕಿ ಕೊಡಲಾಗಿತ್ತು. ಆ ಬೆಂಕಿಯು ಗುಡಿಸಲಿಗೆ ತಾಗಿ ಬೆಂಕಿ ವ್ಯಾಪಿಸಿಕೊಂಡಿತು ಎಂದು ತಿಳಿಬಂದಿದೆ.
ಬೆಂಕಿ ಅಕ್ಕಪಕ್ಕದಲ್ಲೆಲ್ಲಾ ಹಬ್ಬಿದ ಪರಿಣಾಮ ಗುಡಿಸಿಲಿನಲ್ಲಿದ್ದ 2 ಗ್ಯಾಸ್ ಸಿಲಿಂಡರ್ಗಳು ಸ್ಪೋಟಗೊಂಡು ಸ್ಥಳೀಯರ ಆತಂಕಕ್ಕೂ ಕಾರಣವಾಗಿತ್ತು. ಸ್ಥಳೀಯ ನಿವಾಸಿ ಬಾಲಕೃಷ್ಣ ಶೆಟ್ಟಿ ಎಂಬವರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಸಾರ್ವಜನಿಕರೊಂದಿಗೆ ಸೇರಿಕೊಂಡು ಬೆಂಕಿಯನ್ನು ನಂದಿಸಿದ್ದಾರೆ.
ಗುಡಿಸಲು ವಾಸಿಗಳಾದ ಮೇನಪ್ಪ, ವೆಂಕಪ್ಪ, ಉಳ್ಳಪ್ಪ, ಪರಶುರಾಮ, ಚಿನ್ನಸ್ವಾಮಿ, ಸಿದ್ಧಪ್ಪ, ಕಾಲಿಯಪ್ಪ, ಅಪ್ಪಾದೊರೈ, ಶೇಖರ, ಲಕ್ಷ್ಮೀ ಮತ್ತಿತರರ ಮನೆಗಳು ಬೆಂಕಿಗಾಹುತಿಯಾಗಿದೆ. ಮನೆಯ ಪಾತ್ರೆ ಇನ್ನಿತರ ಸೊತ್ತುಗಳು, ಮರಮಟ್ಟು, ನಗದು, ಬಟ್ಟೆಬರೆಗಳ ಸಹಿತ ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ.